ಉಡುಪಿ: ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಗೋವುಗಳನ್ನು ಕಳ್ಳತನಕ್ಕೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.
ಭಾನುವಾರ ರಾತ್ರಿ 2:45 ರ ವೇಳೆಗೆ ದೇವಸ್ಥಾನದ ಗೋ ಶಾಲೆಗೆ ನುಗ್ಗಿದ್ದ ಗೋವು ಕಳ್ಳರು
ಗೋ ಶಾಲೆಯ ಮುಂಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿದ್ದಾರೆ.
ಅಲ್ಲದೇ ಗೋ ಶಾಲೆಯ ಪಕ್ಕದ ಬಾಗಿಲು ತೆರೆದು ಹಸುವಿಗೆ ಕಟ್ಟಿದ ಹಗ್ಗವನ್ನು ಕಳ್ಳರು ತುಂಡರಿಸಿದ್ದನ್ನು ಸೆಕ್ಯುರಿಟಿ ಸಂಸ್ಥೆಯವರು ಲೈವ್ ಮಾನಿಟರಿಂಗ್ ನಲ್ಲಿ ಗಮನಿಸಿ ತಕ್ಷಣ ಮಾಹಿತಿ ನೀಡಿದ್ದಾರೆ.
ಗೋ ಶಾಲೆಗೆ ದಿನದ 24 ಗಂಟೆಗಳ ಕಾಲ ಸಿಸಿ ಟಿವಿ ಮಾನಿಟರಿಂಗ್ ಇರಿಸಿರುವ ಸಂಸ್ಥೆಯವರು ತಕ್ಷಣ ಪೊಲೀಸ್ ಇಲಾಖೆ ಮತ್ತು ದೇವಸ್ಥಾನದ ಭದ್ರತಾ ವಿಭಾಗಕ್ಕೆ ಮಾಹಿತಿ ರವಾನಿಸಿದ್ದಾರೆ.
ತಕ್ಷಣ ದೇವಸ್ಥಾನದ ಭದ್ರತಾ ಸಿಬ್ಬಂದಿ ಗೋ ಶಾಲೆಯತ್ತ ತೆರಳುತ್ತಲೇ ಸ್ಥಳದಿಂದ ಕಳ್ಳರು ಪರಾರಿಯಾಗಿದ್ದಾರೆ.ಶಂಕರನಾರಾಯಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸಿಸಿ ಟಿವಿ ದೃಶ್ಯವನ್ನು ಆಧರಿಸಿ ಪೊಲೀಸರು ಶೋಧ ನಡೆಸಿದ್ದಾರೆ.