ನವೆದೆಹಲಿ: ರಾಜ್ಯದ ಕರಾವಳಿ ಪ್ರದೇಶಗಳಿಗೂ ಕರಾವಳಿ ನಿಯಂತ್ರಣಾ ವಲಯ(ಸಿ ಆರ್ ಝೆಡ್) ವಿಸ್ತರಣೆ ಪಡೆಯಲು ಚೆನ್ನೈನ ಪ್ರಾದೇಶಿಕ ಕಚೇರಿಯಿಂದ ಅನುಮತಿ ದೊರೆತಿದೆ.
ಇದರಿಂದಾಗಿ ರಾಜ್ಯದ ಕರಾವಳಿ ಪ್ರದೇಶ ಅಭಿವೃದ್ಧಿಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನವದೆಹಲಿಯಲ್ಲಿ ಹೇಳಿಕೆ ನೀಡಿದ ಸಿಎಂ, ಗೋವಾ ಹಾಗೂ ಕೇರಳ ರಾಜ್ಯಗಳಲ್ಲಿ ಕರಾವಳಿ ನಿಯಂತ್ರಣಾ ವಲಯ ವಿಸ್ತರಣೆಗೆ ಅನುಮತಿ ನೀಡಿರುವುದರಿಂದ ಹೋಟೆಲ್ ಉದ್ಯಮ, ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಕೂಲವಾಗಿದೆ. ಇದೇ ರೀತಿ ರಾಜ್ಯದ ಕರಾವಳಿ ಪ್ರದೇಶಗಳಿಗೂ ಸಿ ಆರ್ ಝೆಡ್ ವಿಸ್ತರಣೆ ಪಡೆಯಲು ಗಂಭೀರ ಪ್ರಯತ್ನಗಳನ್ನು ಮಾಡಲಾಗಿದ್ದು, ಚೆನ್ನೈನ ಪ್ರಾದೇಶಿಕ ಕಚೇರಿಯಿಂದ ಅನುಮತಿ ದೊರೆತಿದೆ ಎಂದು ಹೇಳಿದ್ದಾರೆ.
ಇದರಿಂದ ಕರ್ನಾಟಕದ 330 ಕಿಲೋ ಮೀಟರ್ ಉದ್ದದ ಕರಾವಳಿ ಪ್ರದೇಶದ ಅಭಿವೃದ್ಧಿಯ ಜೊತೆ, ಆರ್ಥಿಕತೆ, ಪ್ರವಾಸೋದ್ಯಮ, ಮೀನುಗಾರಿಕೆ ಸೇರಿದಂತೆ ಕರಾವಳಿ ಭಾಗದ ಚಟುವಟಿಕೆಗಳು ಅಭಿವೃದ್ಧಿಗೊಳ್ಳಲಿದೆ ಎಂದು ಹೇಳಿರುವ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯದ ಯೋಜನೆಗಳಿಗೆ ಶೀಘ್ರಗತಿಯಲ್ಲಿ ಮಂಜೂರಾತಿ ಪಡೆಯಲು ಕೇಂದ್ರ ಸಚಿವರೊಂದಿಗೆ ಖುದ್ದು ನಾನು ಭೇಟಿಯಾಗುತ್ತಿದ್ದೇನೆ ಎಂದು ತಿಳಿಸಿದ್ದಾರೆ.