ಪುತ್ತೂರು : ಬರೊಬ್ಬರಿ 80ಕ್ಕೂ ಅಧಿಕ ಕಳ್ಳತನ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಕಳ್ಳ ಇತ್ತೆ ಬರ್ಪೆ ಅಬೂಬಕ್ಕರ್ ನನ್ನು ಪುತ್ತೂರು ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈತ ಚಿಕ್ಕಮಗಳೂರು ತಾಲ್ಲೂಕಿನ ವಾಟರ್ ಟ್ಯಾಂಕ್ ಸಮೀಪದ ಉಪ್ಪಳ್ಳಿ ನಿವಾಸಿ.
ಆರೋಪಿ ವಾರದ ಹಿಂದೆ ಕೆದಿಲದ ರಮ್ಲಾಕುಂಞಿ ಎಂಬುವರ ಮನೆಯಿಂದ ₹ 2 ಲಕ್ಷ, ಇಸುಬು ಬ್ಯಾರಿ ಅವರ ಮನೆಯ ಅಂಗಳದಿಂದ ಸ್ಕೂಟಿ ಕದ್ದಿದ್ದ. ರಮ್ಲಾಕುಂಞಿ ಮನೆಯಿಂದ ನಗದು ಹಣ ಕಳವು ಮಾಡಿ ಸ್ಕೂಟಿಯನ್ನು ಕೆದಿಲ ವ್ಯಾಪ್ತಿಯ ಬೇರೊಂದು ಕಡೆ ನಿಲ್ಲಿಸಿ ಪರಾರಿಯಾಗಿದ್ದ. ಸೋಮವಾರ ರಾತ್ರಿ ಸ್ಕೂಟಿ ತೆಗೆದುಕೊಂಡು ಹೋಗಲು ಕೆದಿಲಕ್ಕೆ ಬಂದಿದ್ದ ಅಬೂಬಕ್ಕರ್ನನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ಡಿ.19ರವರಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಆರೋಪಿ ವಿರುದ್ಧ ಮಂಗಳೂರು, ಬಂಟ್ವಾಳ, ಪುತ್ತೂರು, ಮೂಡುಬಿದಿರೆ, ಸುರತ್ಕಲ್, ಕಾರ್ಕಳ, ಉಡುಪಿ, ಚಿಕ್ಕಮಗಳೂರಿನಲ್ಲೂ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.