ಶಿವಮೊಗ್ಗ: ರಾಜ್ಯಪಾಲರಿಗೆ ಬಾಂಗ್ಲಾದೇಶದ ಪರಿಸ್ಥಿತಿ ಬರುತ್ತದೆ ಎಂಬ ಹೇಳಿಕೆ ನೀಡಿದ್ದ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ವಿರುದ್ಧ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಕಿಡಿಕಾರಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಈಶ್ವರಪ್ಪ, ಆತ ಐವಾನ್ ಡಿಸೋಜಾ ಅಲ್ಲ, ಹೈವಾನ್ ಡಿಸೋಜಾ ಆಗಿದ್ದಾನೆ, ಕೂಡಲೇ ಆತನನ್ನು ವಿಧಾನ ಪರಿಷತ್ ಸದಸ್ಯ ಸ್ಥಾನದಿಂದ ಕಿತ್ತು ಬಿಸಾಕಬೇಕು ಎಂದು ಹರಿ ಹಾಯ್ದಿದ್ದಾರೆ.
ಐವಾನ್ ಡಿಸೋಜಾ ಹೇಳಿಕೆಯಿಂದ ಇಡೀ ದೇಶ ತಲೆ ತಗ್ಗಿಸುವಂತಾಯಿತು ಎಂದು ಹೇಳಿರುವ ಕೆ.ಎಸ್. ಈಶ್ವರಪ್ಪ, ಯಾರು ಯಾರು ಈ ರೀತಿಯ ಹೇಳಿಕೆ ನೀಡಿದ್ದಾರೋ ಅವರೆಲ್ಲರೂ ರಾಷ್ಟ್ರದ್ರೋಹಿಗಳೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಂಗ್ಲಾದಲ್ಲಿ ಎಲ್ಲಾ ಸಮುದಾಯದವರ ಅತ್ಯಾಚಾರ, ಕೊಲೆಗಳು ಆಗಿದ್ದು, ಯಾರನ್ನು ತೃಷ್ತಿಪಡಿಸಲು ಅವರು ಈ ರೀತಿ ಹೇಳಿದ್ದಾರೆ ಎಂದು ಪ್ರಶ್ನೆ ಮಾಡಿರುವ ಈಶ್ವರಪ್ಪ, ಈ ಹೇಳಿಕೆ ಇಲ್ಲಿಯ ಮುಸಲ್ಮಾನರಿಗೆ ದಂಗೆ, ಅತ್ಯಾಚಾರ, ಕೊಲೆ ಮಾಡಲು ಪ್ರೋತ್ಸಾಹ ನೀಡಿದಂತೆ ಎಂದು ಹೇಳಿದ್ದಾರೆ.
ಮಂಗಳೂರಿನಲ್ಲಿ ನಡೆದಿದ್ದ ರಾಜ್ಯಪಾಲರ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಐವಾನ್ ಡಿಸೋಜಾ ರಾಜ್ಯಪಾಲರಿಗೆ ಬಾಂಗ್ಲಾದೇಶದಲ್ಲಿ ಆದ ಪರಿಸ್ಥಿತಿಯೇ ಆಗುತ್ತದೆ ಎಂಬ ರೀತಿಯ ಹೇಳಿಕೆ ನೀಡಿದ್ದು ತೀವ್ರ ವಿವಾದಕ್ಕೆ ಕಾರಣವಾಗಿತ್ತು.