ಕಾರ್ಕಳ: ಇಲ್ಲಿನ ಕುಕ್ಕುಜೆ ಗ್ರಾಮದ ದೊಂಡೆರಂಗಡಿಯ ಅಭಿನಯ ಎಸ್. ಶೆಟ್ಟಿ ಏಕಲವ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಎತ್ತರ ಜಿಗಿತ ಸ್ಪರ್ಧೆಯ ಸಾಧನೆಗಾಗಿ ಈ ಪ್ರಶಸ್ತಿ ಈಕೆಯ ಮುಡಿಗೇರಿದೆ.ಆಳ್ವಾಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಅಭಿನಯ ಎಸ್. ಶೆಟ್ಟಿ ಸುಧಾಕರ ಶೆಟ್ಟಿ – ಸಂಜೀವಿ ದಂಪತಿಯ ಪುತ್ರಿ.
8ನೇ ತರಗತಿಯಲ್ಲಿದ್ದಾಗ (2012) ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದ ಅಭಿನಯ ಆರಂಭದಲ್ಲಿ ಹರ್ಡಲ್ ರೇಸ್ ಮೂಲಕ ಸಾಧನೆಯಲ್ಲಿ ತೊಡಗಿ ಕ್ರೀಡಾ ತರಬೇತುದಾರರ ಸಲಹೆಯಂತೆ ಎತ್ತರ ಜಿಗಿತ ಸ್ಪರ್ಧೆಯಲ್ಲಿ ತೊಡಗಿಸಿಕೊಂಡರು.
ಈಕೆ ಅಖೀಲ ಭಾರತ ಮಟ್ಟದ ಕೂಟದಲ್ಲಿ ಬೆಳ್ಳಿ, ಚಿನ್ನ ಗೆದ್ದು ಮಿಂಚಿದವರು. 1.75 ಮೀ. ಹಾರುವ ಮೂಲಕ ಎತ್ತರ ಜಿಗಿತದಲ್ಲಿ ಗಮನಾರ್ಹ ನಿರ್ವಹಣೆ ನೀಡುತ್ತ ಸಾಗಿದರು. ಮೂಡುಬಿದಿರೆಯಲ್ಲಿ ನಡೆದ 79ನೇ ಅಖೀಲ ಭಾರತ ಆಯತ್ಲೆಟಿಕ್ ಕೂಟದಲ್ಲಿ 1.77 ಮೀಟರ್ ಜಿಗಿದು ಬೆಳ್ಳಿಯ ಪದಕ ಗೆದ್ದಿದ್ದಾರೆ. ಹಲವು ಸಾಧನೆಗಳ ರೂವಾರಿ ಅಭಿನಯ ಎಸ್. ಶೆಟ್ಟಿ ಏಕಲವ್ಯ ಪ್ರಶಸ್ತಿಗೆ ಭಾಜನರಾಗಿರುವುದು ಹೆಮ್ಮೆಯ ವಿಷಯ.