ಉಡುಪಿ: ಸರ್ಕಾರಿ ಶಾಲೆಗಳ ವಿಲೀನಕ್ಕೆ ರಾಜ್ಯ ಸರ್ಕಾರ ಮುಂದಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಸ್ಪಷ್ಟೀಕರಣ ನೀಡಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಶಿಕ್ಷಕರ ಕೊರತೆಯಿಂದ ವಿಲೀನ ಮಾಡುತ್ತಿದ್ದೇವೆ ಎನ್ನುವುದು ತಪ್ಪು, ಶಾಲೆ ವಿಲೀನದ ಬಗ್ಗೆ ಎಲ್ಲಾ ಶಾಸಕರು ಮನವಿ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇರುವುದರಿಂದ ಈ ರೀತಿಯ ಪ್ರಸ್ತಾಪಗಳು ಬರುತ್ತಿದ್ದು, ಅನುದಾನ ರಹಿತ ಮತ್ತು ಅನುದಾನಿತ ಶಾಲೆಗಳು ಹೆಚ್ಚು ಇರುವುದರಿಂದ ಮಕ್ಕಳ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ ಎಂದು ಹೇಳಿರುವ ಮಧು ಬಂಗಾರಪ್ಪ, ಕಡಿಮೆ ಸಂಖ್ಯೆಯಲ್ಲಿ ಮಕ್ಕಳಿರುವ ಶಾಲೆಯನ್ನು ಹೆಚ್ಚು ಸಂಖ್ಯೆ ಇರುವ ಶಾಲೆ ಜೊತೆ ವಿಲೀನ ಮಾಡುತ್ತವೆ ಎಂದು ತಿಳಿಸಿದ್ದಾರೆ.
ಅಲ್ಲದೇ, ಶಿಕ್ಷಕರನ್ನು ಅದೇ ಶಾಲೆಗೆ ವರ್ಗಾವಣೆ ಮಾಡುವುದರಿಂದ ಶಿಕ್ಷಕರ ಸಂಖ್ಯೆ ಕಡಿಮೆ ಇದೆ ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ ಬದಲಾಗಿ ಒಂದೇ ಶಾಲೆಗೆ ಶಿಕ್ಷಕರು ಮತ್ತು ಮಕ್ಕಳು ಬಂದಾಗ ವಿಲೀನ ವಿಚಾರ ಉಪಯೋಗ ಆಗುತ್ತದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.