ಪುತ್ತೂರು : ಧರ್ಮಾಚರಣೆ ವ್ಯಕ್ತಿಯ ವೈಯಕ್ತಿಕ ವಿಚಾರವಾಗಿದ್ದು, ಇದರಲ್ಲಿ ಮೂಗು ತೂರಿಸುವ ಕೆಲಸವನ್ನು ಯಾರೂ ಮಾಡಬಾರದು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದರು. ಪುತ್ತೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ರಾಜ್ಯದಲ್ಲಿ ಯಾರೂ ಯಾವ ಧರ್ಮದ ಮೇಲೂ ಪ್ರಹಾರ ಮಾಡುವ ಕೆಲಸ ಮಾಡಿಲ್ಲ. ಆದರೆ ಕೆಲವು ಶಕ್ತಿಗಳು ತಾವು ಸಂವಿಧಾನದ ವಿಚಾರವನ್ನೂ ಒಪ್ಪುದಿಲ್ಲ, ಕೋರ್ಟ್ ಆದೇಶಕ್ಕೂ ತಲೆ ಬಾಗುವುದಿಲ್ಲ ಎಂದು ಗೂಂಡಾಗಿರಿಯನ್ನು ಪ್ರದರ್ಶಿಸುತ್ತಿದೆ.
ಇಂಥಹ ಬೆಳವಣಿಗೆಗೆಳು ನಡೆದಾಗ ಸಮಾಜವೂ ಇದಕ್ಕೆ ಪ್ರತಿಕ್ರಿಯೆ ನೀಡುವುದು ಸಹಜವಾಗಿದ್ದು, ಇಂಥಹ ಪ್ರತಿಕ್ರಿಯೆಯೇ ರಾಜ್ಯದಲ್ಲಿ ನಡೆದಿದೆ. ಸಮಾಜದಲ್ಲಿ ಗೊಂದಲ ಸೃಷ್ಟಿಸಿದವರೇ ಇದೀಗ ಪ್ರಶ್ನಿಸುತ್ತಿರುವುದು ಹಾಸ್ಯಾಸ್ಪದ ವಿಚಾರ ಎಂದರು. ಈ ಬೆಳವಣಿಗೆಯ ಹಿಂದೆ ಬಿಜೆಪಿ ಪಕ್ಷದ ಕೈವಾಡವಿದೆ ಎಂದು ಆರೋಪಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ಉತ್ತರ ನೀಡಿದ ಅವರು ಕುಮಾರಸ್ವಾಮಿ ಈ ಹಿಂದೆ ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಆರೋಪ ಮಾಡುತ್ತಿದ್ದರು. ಈಗ ಬಿಜೆಪಿ ವಿರುದ್ಧ ಮಾತನಾಡುತ್ತಿದ್ದಾರೆ.
ಜೆಡಿಎಸ್ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ರಾಜ್ಯದ ಜನತೆ ಗಮನಿಸುತ್ತಿದ್ದು, ಈ ಬೆಳವಣಿಗೆಯಿಂದ ಸ್ಥಿರತೆ ಕಳೆದುಕೊಂಡು ಈ ರೀತಿಯ ಹೇಳಿಕೆ ನೀಡುತ್ತಿದ್ದು, ಅವರ ಹೇಳಿಕೆಗೆ ಕಮೆಂಟ್ ಮಾಡುವುದಿಲ್ಲ ಎಂದರು.