ಕಾಣಿಯೂರು; ನಾವೆಲ್ಲಾ ಸೆಲೆಬ್ರೆಟಿಗಳು ಬೇರೆ ಬೇರೆ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದನ್ನು ನೋಡಿದ್ದೇವೆ. ಅದರಲ್ಲೂ ಯುವಕರಿಗಂತೂ ಬರ್ತಡೇ ಅಂದ್ರೆ ಪಾರ್ಟಿ ಮಾಡೋದು ಕುಣಿದು ಕುಪ್ಪಳಿಸೋದು ಎಂಬಂತಾಗಿದೆ. ಆದರೆ ಕಡಬ ತಾಲೂಕಿನ ಕಾಣಿಯೂರಿನ ಯುವಕರೊಬ್ಬರು ಕಳೆದ 6 ವರ್ಷಗಳಿಂದ ವಿಭಿನ್ನವಾಗಿ ಬರ್ತಡೇ ಆಚರಿಸಿಕೊಂಡು ಬರುತ್ತಿದ್ದಾರೆ.
ಕಾಣಿಯೂರಿನ ಚಾರ್ವಾಕದ ವಾಲ್ತಾಜೆಯ ರಾಜೇಶ್ ಅವರು ಪ್ರತಿ ವರ್ಷ ತಮ್ಮ ಬರ್ತಡೇಯನ್ನು ವಿಶೇಷವಾದ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಕಳೆದ ಆರು ವರ್ಷಗಳಿಂದ ಬಡ ಕುಟುಂಬದವರಿಗೆ ಅಡಿಕೆ ಗಿಡವನ್ನು ನೆಟ್ಟು ಕೊಡವುದರ ಮೂಲಕ ಹುಟ್ಟುಹಬ್ಬಕ್ಕೊಂದು ವಿಶೇಷ ಅರ್ಥ ತಂದುಕೊಡುತ್ತಿದ್ದಾರೆ.
ತಮ್ಮದೇ ಜೆಸಿಬಿ, ಹಿಟಾಚಿಯನ್ನು ಹೊಂದಿರುವ ರಾಜೇಶ್ ಅವರು ಅಡಿಕೆ ಗಿಡ ನೆಡಲು ಗುಂಡಿ ತೋಡಿ, ಬಳಿಕ ಅಡಿಕೆ ಸಸಿ ನೆಟ್ಟು ಕೊಡುತ್ತಾರೆ. ಅದರಂತೆ ನಿನ್ನೆ ಅವರ ಹುಟ್ಟುಹಬ್ಬ ಹಿನ್ನೆಲೆ ಸುಳ್ಯ ತಾಲೂಕಿನ ಬೀದಿಗುಡ್ಡೆ ಸಮೀಪ ಆರ್ಥಿಕವಾಗಿ ತುಂಬಾ ಸಂಕಷ್ಟದಲ್ಲಿರುವ ಭಾಸ್ಕರ ಗೌಡ ಎಂಬವರಿಗೆ ರಾಜೇಶ್ ಅವರು ಅವರದೇ ಜೆಸಿಬಿಯಲ್ಲಿ ಸುಮಾರು 300 ಅಡಿಕೆ ಗಿಡದ ಗುಂಡಿಗಳನ್ನು ತೆಗೆದು, ಅಡಿಕೆ ಸಸಿಗಳನ್ನು ನೆಟ್ಟು ಕೊಟ್ಟಿದ್ದಾರೆ. ಇದಕ್ಕೆ ಅವರ ಸುಮಾರು 16 ಜನ ಸ್ನೇಹಿತರು ಸಾಥ್ ನೀಡಿದ್ದಾರೆ. ಇನ್ನು ಈ ವೇಳೆ ರಾಜೇಶ್ ವಾಲ್ತಾಜೆ ಅವರ ಪತ್ನಿ ಹಾಗೂ ಮಕ್ಕಳು ಉಪಸ್ಥಿತರಿದ್ದರು.
ಒಟ್ಟಿನಲ್ಲಿ ಹುಟ್ಟುಹಬ್ಬ ಎಂದರೆ ಇಷ್ಟೇ ಅನ್ನೋ ಕಲ್ಪನೆಯನ್ನು ರಾಜೇಶ್ ವಾಲ್ತಾಜೆ ಅವರು ಹುಸಿಯಾಗಿದ್ದಾರೆ. ಹೀಗೂ ನಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಮೂಲಕ ಇತರರ ಮುಖದಲ್ಲಿ ನಗು ಮೂಡಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ.