ನೆಲ್ಯಾಡಿ : ಮೇಯಲು ಬಿಟ್ಟಿದ್ದ ದನವನ್ನು ಮನೆಗೆ ಕರೆದುಕೊಂಡು ಹೋಗುವಾಗ ಬೊಲೆರೋ ವಾಹನದಲ್ಲಿ ಬಂದ ಯುವಕರ ತಂಡ ನನ್ನ ಬಟ್ಟೆ ಹರಿದು ಮಾನಭಂಗಕ್ಕೆ ಯತ್ನಿಸಿ, ತಾಳಿ ಕಿತ್ತು ಹಲ್ಲೆ ನಡೆಸಿತ್ತು ಎಂದು ಮಹಿಳೆಯೊಬ್ಬರು ನೆಲ್ಯಾಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ವಾಸ್ತವಾಂಶವನ್ನು ಪೊಲೀಸರು ಕಂಡುಹಿಡಿದಿದ್ದಾರೆ.
ಈ ಪ್ರಕರಣದಲ್ಲಿ ಮಹಿಳೆಯು ಸುಳ್ಳು ದೂರು ನೀಡಿದ್ದು ಮಹಿಳೆಗೂ ತಮಗೂ ಯಾವುದೇ ರೀತಿಯ ಸಂಬಂಧವಿಲ್ಲ. ಘಟನಾ ಸ್ಥಳದಲ್ಲಿ ಮಹಿಳೆ ಇರಲೇ ಇಲ್ಲ ಎಂದು ಯುವಕರ ಗುಂಪು ಸ್ಪಷ್ಟಪಡಿಸಿದೆ. ಪುತ್ತೂರಿನಿಂದ ಕೊಕ್ಕಡಕ್ಕೆ ಪೆರಿಯ ಶಾಂತಿ ಮಾರ್ಗವಾಗಿ ಬರುತ್ತಿದ್ದ ವೇಳೆ ಪಾನಮತ್ತನಾಗಿ ಕರುವನ್ನು ಕರೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಕಾಣಿಸಿದ್ದಾನೆ. ಬಳಿಕ ಕರುವನ್ನು ಸುರಕ್ಷತೆಯಿಂದ ಕರೆದುಕೊಂಡು ಹೋಗಲು ಯುವಕರು ಕಿವಿಮಾತು ಹೇಳಿದ್ದರು.
ಘಟನೆಯ ಬಗ್ಗೆ ಮಹಿಳೆಯ ಪತಿ ಮಹಿಳೆಯ ಪರವಾಗಿ ಅದೇ ದಿನ ರಾತ್ರಿ ನೆಲ್ಯಾಡಿ ಹೊರಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಏಪ್ರಿಲ್ 28 ರ ಬೆಳಿಗ್ಗೆ ಮಹಿಳೆಯನ್ನು ವಿಚಾರಿಸಿದಾಗ ಮಹಿಳೆಯು ತನ್ನ ಕೆಲಸದಾಳು ಮೇಲೆ ನಡೆದ ಹಲ್ಲೆ ಹಾಗೂ ಕೊಕ್ಕಡದ ಯುವಕರ ತಂಡ ತನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಬಗ್ಗೆ ಹೇಳಿಕೆ ನೀಡಿದ್ದರು.
ಯುವಕರ ತಂಡವನ್ನು ಠಾಣೆಗೆ ಕರೆಸಿಕೊಂಡ ಪೊಲೀಸರು ಯುವಕರನ್ನು ವಿಚಾರಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಯುವಕರ ತಂಡ ತಾವು ಯಾವುದೇ ರೀತಿ ಹಲ್ಲೆ ನಡೆಸಿಲ್ಲ ಘಟನಾ ಸ್ಥಳದಲ್ಲಿ ಯಾವ ಮಹಿಳೆಯನ್ನು ನಾವು ನೋಡಿಲ್ಲ. ಒಬ್ಬ ವ್ಯಕ್ತಿ ಹಾಗೂ ಸಣ್ಣ ಕರು ಮಾತ್ರ ಇದ್ದು, ಕರುವಿನ ಸುರಕ್ಷತೆಯ ವಿಷಯವಾಗಿ ಮಾಹಿತಿ ತಿಳಿದುಕೊಂಡಿದ್ದೇವೆ ಹೊರತು ಬೇರೆ ಯಾವ ಘಟನೆಯೂ ನಡೆದಿಲ್ಲ ಎಂದು ತಿಳಿಸಿದ್ದಾರೆ.
ಈ ನಡುವೆ ಮಹಿಳೆಯು ಪೆರಿಯ ಶಾಂತಿ ಬಳಿ ಇರುವ ತಮ್ಮ ಗೂಡಂಗಡಿಯಿಂದ ಘಟನಾಸ್ಥಳಕ್ಕೆ ತಮ್ಮ ರಿಕ್ಷಾದಲ್ಲೇ ಬಂದಿದ್ದಾಗಿ, ಘಟನಾ ಸ್ಥಳಕ್ಕೆ ಆಕೆ ಬಂದಾಗ ಅಲ್ಲಿ ಕರು ಮತ್ತು ಆ ವ್ಯಕ್ತಿಯ ಹೊರತು ಬೇರೆ ಯಾರೂ ಇರಲಿಲ್ಲ ಎಂದು ರಿಕ್ಷಾ ಚಾಲಕ ಸ್ಪಷ್ಟಪಡಿಸಿದ್ದಾರೆ. ಈತನ ಹೇಳಿಕೆಯನ್ನು ಕೂಡ ಪೊಲೀಸರು ದಾಖಲಿಸಿದ್ದಾರೆ.
ಎರಡು ತಂಡದ ಹೇಳಿಕೆಯನ್ನು ಆಲಿಸಿದ ನೆಲ್ಯಾಡಿ ಹೊರಠಾಣಾ ಪೊಲೀಸರು ಪ್ರಕರಣದ ಸತ್ಯಾಸತ್ಯತೆಯ ತನಿಖೆಯನ್ನು ನಡೆಸುತ್ತಿದ್ದಾರೆ.