ಮಂಗಳೂರು: ಬಿಕರ್ನಕಟ್ಟೆಯಲ್ಲಿ ಡಿವೈಡರ್ಗೆ ಸ್ಕೂಟರ್ ಡಿಕ್ಕಿ ಹೊಡೆದು ಇಬ್ಬರು ಗಂಭೀರ ಗಾಯಗೊಂಡಿದ್ದ ಪ್ರಕರಣದಲ್ಲಿ ಸಹ ಸವಾರ ಧೀರಜ್(25) ಮೃತಪಟ್ಟಿದ್ದಾರೆ. ಈ ನಡುವೆ ಮೆದುಳು ನಿಷ್ಕ್ರಿಯ ಕಾರಣಕ್ಕಾಗಿ ಹೆತ್ತವರು ಅಂಗಾಗ ದಾನ ಮಾಡಲು ಮುಂದಾಗಿದ್ದರೂ, ಪ್ರಕ್ರಿಯೆ ವಿಳಂಬವಾದ ಹಿನ್ನೆಲೆಯಲ್ಲಿ ಸಾಧ್ಯವಾಗಿಲ್ಲ.
ಶನಿವಾರ ತಡರಾತ್ರಿ 2.15ರ ವೇಳೆಗೆ ಧೀರಜ್ನನ್ನು ಸ್ನೇಹಿತ ಗಣೇಶ್ ಕುಲಶೇಖರದ ಮನೆಗೆ ತನ್ನ ಸ್ಕೂಟರ್ನಲ್ಲಿ ಬಿಡಲು ತೆರಳುತ್ತಿದ್ದಾಗ ಬಿಕರ್ನಕಟ್ಟೆ ಬಳಿ ನಿಯಂತ್ರಣ ಕಳೆದುಕೊಂಡು ರಾಷ್ಟ್ರೀಯ ಹೆದ್ದಾರಿ 75ರ ಡಿವೈಡರ್ಗೆ ಸ್ಕೂಟರ್ ಡಿಕ್ಕಿಯಾಗಿ ಪಲ್ಟಿಯಾಗಿದೆ. ಘಟನೆಯಲ್ಲಿ ಇಬ್ಬರೂ ಗಂಭೀರ ಗಾಯಗೊಂಡಿದ್ದು, ಈ ವೇಳೆ ಬಾಡಿಗೆಗೆಂದು ತೆರಳುತ್ತಿದ್ದ ಆಟೋ ಚಾಲಕರೊಬ್ಬರು, ಸಾರ್ವಜನಿಕರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಿದ್ದರು.
ತಲೆಗೆ ತೀವ್ರ ಗಾಯವಾಗಿದ್ದ ಹಿನ್ನೆಲೆಯಲ್ಲಿ ಧೀರಜ್ ಬ್ರೈನ್ಡೆಡ್ ಆಗಿದೆ ಎಂದು ಸೋಮವಾರ ರಾತ್ರಿ ವೈದ್ಯರು ಘೋಷಿಸಿದ್ದರು. ವೈದ್ಯರ ಸಲಹೆಯಂತೆ ಮನೆಯವರು ಅಂಗಾಗ ದಾನ ಪ್ರಕ್ರಿಯೆಗೆ ಒಪ್ಪಿಗೆ ಸೂಚಿಸಿದ್ದು, ಅದರಂತೆ ಮಂಗಳವಾರ ಚೆನ್ನೈನ ಆಸ್ಪತ್ರೆಯೊಂದರ ವೈದ್ಯರ ತಂಡ ಅಂಗಾಗ ಪಡೆಯಲು ವಿಶೇಷ ವಿಮಾನದಲ್ಲಿ ಆಗಮಿಸಿತ್ತು. ಆದರೆ ಬೆಂಗಳೂರಿನಿಂದ ತಜ್ಞರ ತಂಡ ಬರುವಾಗ ವಿಳಂಬವಾಯಿತು. ಈ ವೇಳೆ ಧೀರಜ್ ಕೊನೆಯುಸಿರೆಳೆದಿದ್ದರು. ಹಾಗಾಗಿ ಅಂಗಾಂಗ ದಾನ ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.