ಬೆಂಗಳೂರು: 2021-22 ನೇ ಸಾಲಿನಿ ದೇವರಾಜ ಅರಸು ಪ್ರಶಸ್ತಿ ಘೋಷಣೆಯಾಗಿದೆ. ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇಂದು ವಿಧಾನಸೌಧದಲ್ಲಿ ಪ್ರಶಸ್ತಿ ಘೋಷಣೆ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಭಾಸ್ಕರ್ ದಾಸ್ ಎಕ್ಕಾರು ಅವರಿಗೆ 2021-22ನೇ ಸಾಲಿನ ದೇವರಾಜ ಅರಸು ಪ್ರಶಸ್ತಿ ಲಭಿಸಿದೆ. ಅಲೆಮಾರಿ ಜನಾಂಗದ ಶ್ರೇಯೋಭಿವೃದ್ದಿಗೆ ಹೋರಾಟ ಮಾಡಿದ್ದಕ್ಕಾಗಿ ರಾಜ್ಯ ಸರ್ಕಾರ ಪ್ರಶಸ್ತಿ ಘೋಷಣೆ ಮಾಡಿದೆ.
ಕೆ. ಭಾಸ್ಕರ ದಾಸ್ ಎಕ್ಕಾರು ರವರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ತೆಂಕ ಎಕ್ಕಾರು ಗ್ರಾಮದ ಚೆನ್ನದಾಸರ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇತ್ತೀಚಿಗಷ್ಟೇ ಭಾರತ ಸರ್ಕಾರದ ಸೋಷಿಯಲ್ ಜಸ್ಟಿಸ್ ಎಂಪವರ್ ಮೆಂಟ್ ಸಚಿವಾಲಯದ ಅಡಿಯಲ್ಲಿರುವ ಎನ್ ಟಿ-ಎಸ್ ಎನ್ ಟಿ-ಡಿಎನ್ ಟಿ ಡೆವಲಪ್ಮೆಂಟ್ ಬೋರ್ಡ್ ಸದಸ್ಯರಾಗಿ ಆಯ್ಕೆಯಾಗಿದ್ದು, ಕರ್ನಾಟಕ ಅಲೆಮಾರಿ, ಅರೆ ಅಲೆಮಾರಿ, ವಿಮುಕ್ತ ಬುಡಕಟ್ಟುಗಳ ಒಕ್ಕೂಟದ ರಾಜ್ಯಾಧ್ಯಕ್ಷರಾಗಿ ಅಲೆಮಾರಿ ಸಮುದಾಯಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ.
ಅಲ್ಲದೇ ದಕ್ಷಿಣ ಕನ್ನಡ ಜಿಲ್ಲೆಯ ಚೆನ್ನದಾಸರ್ ಸಮುದಾಯದ ಅಭಿವೃದ್ಧಿಗಾಗಿ ಚೆನ್ನದಾಸರ್ ಸಮಾಜ ಸೇವಾ ಸುಧಾರಕ ಸಂಘವನ್ನು ರಚಿಸಿ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಚೆನ್ನದಾಸರ್ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
ಕರ್ನಾಟಕ ರಾಜ್ಯದ ಅಲೆಮಾರಿ ಸೂಕ್ಷ್ಮ ಅತಿಸೂಕ್ಷ್ಮ ಪರಿಶಿಷ್ಟ ಜಾತಿಯ 51, ಪರಿಶಿಷ್ಟ ಪಂಗಡದ 23 ಸಮುದಾಯ, ಹಿಂದುಳಿದ ವರ್ಗಗಳ 46 ಸಮುದಾಯಗಳ ಅಲೆಮಾರಿಗಳನ್ನು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಾಂಸ್ಕೃತಿಕವಾಗಿ ಮುಖ್ಯವಾಹಿನಿಗೆ ತರಲು ಕೂಡಾ ಶ್ರಮಿಸಿದ್ದಾರೆ.
ಭಾಸ್ಕರ ದಾಸ್ ಅವರಿಗೆ ನಾಳೆ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.