ಮಂಗಳೂರು: ಪಚ್ಚನಾಡಿ ಘನತ್ಯಾಜ್ಯ ಘಟಕದ ಸುತ್ತಮುತ್ತಲಿನ ಪ್ರದೇಶದಲ್ಲಿ ಕುಡಿಯುವ ನೀರು ಅತಿಯಾಗಿ ಕಲುಷಿತಗೊಂಡಿದೆ ಎಂದು ಹೈಕೋರ್ಟ್ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಸಲ್ಲಿಸಿದೆ.
ಈ ಪ್ರದೇಶದಲ್ಲಿ ಕುಡಿಯುವ ನೀರಿನಲ್ಲಿ ವಿವಿಧ ಅಂಶಗಳು ಹೆಚ್ಚಿರುವುದನ್ನು ಗಮನಿಸಿದ ನ್ಯಾಯಾಲಯ, ಸಮಸ್ಯೆಗಳನ್ನು ಪರಿಹರಿಸಲು ತಕ್ಷಣವೇ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಮತ್ತು ಮಂಗಳೂರು ಮಹಾನಗರ ಪಾಲಿಕೆಗೆ ನಿರ್ದೇಶನ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮ ನೇತೃತ್ವದ ವಿಭಾಗೀಯ ಪೀಠದಲ್ಲಿ ಪಚ್ಚನಾಡಿಯಲ್ಲಿನ ಸಮಸ್ಯೆ ಕುರಿತು ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಮಂಗಳವಾರ ನಡೆದಿದೆ.ಮಂಗಳೂರು ನಗರದ ಜನತೆಗೆ ಕಲುಷಿತ ನೀರು ಪೂರೈಸುತ್ತಿರುವುದು ಗಂಭೀರ ವಿಷಯ. ಆದರೆ, ರಾಜ್ಯ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಪೀಠ ಹೇಳಿತು.
ಅಮೋನಿಯಾ ಮತ್ತು ಕಬ್ಬಿಣದ ಅಂಶ ಪಚ್ಚನಾಡಿ ಸುತ್ತಮುತ್ತಲಿನ ನೀರಿನಲ್ಲಿ ಅತಿಯಾಗಿರುವುದು ಕಂಡುಬಂದಿದೆ. ಘನತ್ಯಾಜ್ಯ ಭೂಭರ್ತಿ ಘಟಕಗಳು, ಕೊಳಚೆ ನೀರಿನಲ್ಲಿ ಕಂಡುಬರುವ ವಿಷಕಾರಿ ರಾಸಾಯನಿಕ ಅಂಶಗಳೂ ಪತ್ತೆಯಾಗಿವೆ. ಅಲ್ಲಿನ ನೀರು ಅತಿಯಾಗಿ ಕಲುಷಿತಗೊಂಡಿರುವುದನ್ನು ವರದಿ ದೃಢಪಡಿಸಿದೆ ಎಂದು ನ್ಯಾಯಪೀಠ ವಿಚಾರಣೆ ವೇಳೆ ಹೇಳಿತು.
ಇನ್ನು ರಾಜ್ಯ ಸರ್ಕಾರ ಮತ್ತು ಮಂಗಳೂರು ಮಹಾನಗರ ಪಾಲಿಕೆ ವಕೀಲರು ಮಾಲಿನ್ಯ ನಿಯಂತ್ರಣ ಮಂಡಳಿ ವರದಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಸಲ್ಲಿಸಲು ಕಾಲಾವಕಾಶ ನೀಡುವಂತೆ ಕೋರಿದರು. ಸೆಪ್ಟೆಂಬರ್ 13ಕ್ಕೆ ವಿಚಾರಣೆ ಮುಂದೂಡಿದ ನ್ಯಾಯಾಲಯ, ಸಮಸ್ಯೆ ಪರಿಹಾರಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ಪ್ರತಿವಾದಿಗಳು ಸೂಚಿಸಿತು.
ಆ ಪ್ರದೇಶದ ನೀರಿನ ಗುಣಮಟ್ಟ ಕುರಿತು ಮಂಗಳೂರು ಮಹಾನಗರ ಪಾಲಿಕೆ ಸಲ್ಲಿಸಿದ್ದ ಎಲ್ಲ ವರದಿಗಳನ್ನೂ ಪರಿಶೀಲಿಸಿ, ಅಭಿಪ್ರಾಯ ನೀಡುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ಹೈಕೋರ್ಟ್ ಸೂಚಿಸಿತ್ತು. ಸಮಸ್ಯೆ ಪರಿಹಾರಕ್ಕೆ ಪಾಲಿಕೆ ಸೂಚಿಸಿದ್ದ ಕ್ರಮಗಳ ಕುರಿತೂ ಪರಿಶೀಲಿಸಿ ವರದಿ ನೀಡುವಂತೆ ನಿರ್ದೇಶನ ನೀಡಲಾಗಿತ್ತು.