Friday, June 26, 2026
Homeಕರಾವಳಿವಿಜ್ಞಾನ ಪ್ರಯೋಗಗಳ ಪ್ರಾತ್ಯಕ್ಷತೆ ಮಕ್ಕಳ ಗ್ರಹಿಕೆಗೆ ಅನುಕೂಲಕರ: ಸುಭಾಷ್ಚಂದ್ರ ಶೆಟ್ಟಿ

ವಿಜ್ಞಾನ ಪ್ರಯೋಗಗಳ ಪ್ರಾತ್ಯಕ್ಷತೆ ಮಕ್ಕಳ ಗ್ರಹಿಕೆಗೆ ಅನುಕೂಲಕರ: ಸುಭಾಷ್ಚಂದ್ರ ಶೆಟ್ಟಿ

- Advertisement -
- Advertisement -

ಬೆಳ್ತಂಗಡಿ: ವಿದ್ವತ್ ಪಿಯು ಕಾಲೇಜು ಗುರುವಾಯನಕೆರೆಯ ಇನ್ಸ್ಪೈರ್ ವಿದ್ವತ್ ಸೈನ್ಸ್ ಫೋರಂ ಇದರ ಆಶ್ರಯದಲ್ಲಿ ಆಯೋಜಿಸಿದ ಹತ್ತನೇ ತರಗತಿಯ ಪಠ್ಯಪುಸ್ತಕದಲ್ಲಿ ಎನ್ ಸಿ ಇ ಆರ್ ಟಿ ಮಾರ್ಗಸೂಚಿಯ ಪ್ರಕಾರ ನೀಡಿದ “ವಿಜ್ಞಾನ ಪ್ರಯೋಗಗಳ ಪ್ರಾತ್ಯಕ್ಷತೆ” ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕಿನ ವಿವಿಧ ಶಾಲೆಗಳಿಂದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ, ನಿವೃತ್ತ ಪ್ರಾಂಶುಪಾಲ ಹಾಗೂ ಶಿಕ್ಷಣ ತಜ್ಞ ಶ್ರೀಯುತ ಪಾರ್ಥಸಾರಥಿಯವರು ಭಾಗವಹಿಸಿದ್ದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿದ್ವತ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಯುತ ಸುಭಾಷ್ ಚಂದ್ರ ಶೆಟ್ಟಿಯವರು ಮಾತನಾಡಿ, ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕದಲ್ಲಿ ನೀಡಿರುವಂತಹ ಪ್ರತಿಯೊಂದು ವಿಷಯಗಳ ಪರಿಕಲ್ಪನೆಯ ತಿಳುವಳಿಕೆ ಬಹಳ ಮುಖ್ಯವಾಗಿದೆ. ವಿಜ್ಞಾನ ಪ್ರಯೋಗಗಳ ಪ್ರಾತ್ಯಕ್ಷತೆಯು, ವಿದ್ಯಾರ್ಥಿಗಳು ವಿಷಯವನ್ನು ಆಳವಾಗಿ ಅರ್ಥೈಸಿಕೊಳ್ಳಲು ಅನುಕೂಲವಾಗುತ್ತದೆ. ಪ್ರಾಥಮಿಕ ಮತ್ತು ಪ್ರೌಢ ಹಂತದಲ್ಲಿ ವಿದ್ಯಾರ್ಥಿಗಳಿಗೆ ವಿಜ್ಞಾನವನ್ನು ಪ್ರಯೋಗಗಳ ಮೂಲಕ ಕಲಿಸಿದಲ್ಲಿ, ಅವರಲ್ಲಿ ಕ್ರಿಯಾಶೀಲತೆ ಮತ್ತು ಸೃಜನಶೀಲತೆ ಬೆಳೆಯುತ್ತದೆ. ವಿದ್ವತ್ ಎಜುಕೇಶನ್ ಫೌಂಡೇಶನ್, ಮಕ್ಕಳ ಹಿತದೃಷ್ಟಿಯಿಂದ ಇಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ. ವಿದ್ವತ್ ಎಜುಕೇಶನ್ ಫೌಂಡೇಶನ್ ಇದರ ಆಶ್ರಯದಲ್ಲಿ “ಇನ್ಸ್ಪೈರ್ ವಿದ್ವತ್ ಸೈನ್ಸ್ ಫೋರಂ” ಮೂಲಕ ಗ್ರಾಮೀಣ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಅನುಕೂಲವಾಗುವ ಇಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಗುರಿಯನ್ನು ಹೊಂದಿದೆ. ಶಿಕ್ಷಣ ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಸಂಸ್ಥೆಯ ಕಾರ್ಯದರ್ಶಿಯವರಾದ ಶ್ರೀ ಪ್ರಜ್ವಲ್ ರೈ, ಶ್ಶೈಕ್ಷಣಿಕ ನಿರ್ದೇಶಕರಾದ ಶ್ರೀ ಗಂಗಾಧರ ಇ.ಮಂಡಗಳಲೆ, ಆಡಳಿತಾಧಿಕಾರಿಯವರಾದ ಶ್ರೀ ಅಶೋಕ ಕುಮಾರ್ ಶೆಟ್ಟಿ , ಪ್ರಾಂಶುಪಾಲರಾದ ಶ್ರೀ ಹರೀಶ್ ಕೆ.ಆರ್ ಉಪಸ್ಥಿತರಿದ್ದರು. ವಿದ್ವತ್ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀ ಪ್ರತಾಪ್ ದೊಡ್ಡಮನಿಯವರು ರಸಾಯನ ಶಾಸ್ತ್ರದ ಪ್ರಯೋಗಗಳು ವೈಜ್ಞಾನಿಕ ಮನೋಭಾವ ಬೆಳೆಸುವತ್ತ ಹೇಗೆ ನಿಜ ಜೀವನದಲ್ಲಿ ಕನೆಕ್ಟ್ ಆಗುತ್ತವೆ ಎಂಬುದನ್ನ ವಿವರಿಸಿದರು. ಗಣಿತಶಾಸ್ತ್ರ ವಿಭಾಗ ಮುಖ್ಯಸ್ಥರಾದ ಶ್ರೀ ರಂಗನಾಥ್ ಆರ್ ರವರು ವಿದ್ವತ್ ಫಾರ್ಮುಲಾ ಕಿರು ಹೊತ್ತಿಗೆ ಯನ್ನು ಬಿಡುಗಡೆ ಮಾಡಿ ಅವುಗಳ ಪ್ರಾಮುಖ್ಯತೆಯನ್ನು ವಿವರಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ತಮ್ಮ ಅನುಭವವನ್ನು ಹಂಚಿಕೊಂಡು, ಇಂದು ತಮ್ಮ ಪಾಲಿಗೆ ಅವಿಸ್ಮರಣೀಯ ದಿನ, ಇದೊಂದು ಉತ್ತಮ ಭೌದ್ಧಿಕ ಸಾಮರ್ಥ್ಯ ವೃದ್ಧಿಸುವ ಕಾರ್ಯಾಗಾರ ಹಾಗೂ ಪರೀಕ್ಷಾದೃಷ್ಠಿಯಿಂದಲೂ ಇದರ ಅಗತ್ಯತೆ ಬಹಳ ಇದೆ. ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಸಂಸ್ಥೆಗೆ ಧನ್ಯವಾದಗಳು ಎಂದರು.ಕನ್ನಡ ಉಪನ್ಯಾಸಕರಾದ ಶ್ರೀ ನೀಲಕಂಠ ಕೆ ಎನ್ ಕಾರ್ಯಕ್ರಮ ನಿರೂಪಿಸಿದರು ಹಾಗೂ ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶ್ರೀ ಬಸವ ಕಿರಣ್ ಜೆ.ಹೆಚ್ ಧನ್ಯವಾದ ಸಮರ್ಪಿಸಿದರು.

- Advertisement -

Latest News

error: Content is protected !!