ಶಿವಮೊಗ್ಗ: ಶಿವಮೊಗ್ಗದ ಮಂಡ್ಲಿ-ಕಲ್ಲೂರು ಕೈಗಾರಿಕಾ ಪ್ರದೇಶದ ಬಳಿಯ ಶಾರದಾ ನಗರದಲ್ಲಿ ಕಲುಷಿತ ನೀರು ಸೇವಿಸಿ ಕೂಲಿ ಕಾರ್ಮಿಕನೋರ್ವ ಮೃತಪಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮೃತಗೊಂಡ ವ್ಯಕ್ತಿಯು ಶಾರದಾ ನಗರದ ರಘು ಎಂದು ತಿಳಿದುಬಂದಿದೆ. ಫ್ಯಾಕ್ಟರಿಯಲ್ಲಿ ವೆಲ್ಡಿಂಗ್ ಮೆಕ್ಯಾನಿಕ್ ಆಗಿದ್ದ ರಘು ಕೆಲಸ ಅರಸಿ ದಶಕಗಳ ಹಿಂದೆ ಒಡಿಶಾದಿಂದ ಶಿವಮೊಗ್ಗಕ್ಕೆ ಬಂದಿದ್ದರು. ಜೂನ್ 12 ರಂದು ಸಂಜೆ ವಾಂತಿ ಭೇದಿಯಿಂದ ತೀವ್ರ ಅಸ್ವಸ್ಥಗೊಂಡಿದ್ದ ರಘು ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಶಾರದಾ ನಗರದಲ್ಲಿನ ರಘು ಅವರ ಕುಟುಂಬ ಕಲ್ಲೂರು ಕೈಗಾರಿಕಾ ಪ್ರದೇಶ ಬಳಿಯ ಶಾರದಾ ನಗರದ ಮುಖ್ಯರಸ್ತೆಯಲ್ಲಿ ವಾಸವಿದ್ದರು. ಕಲುಷಿತ ನೀರು ಸೇವಿಸಿದ್ದ ಕಾರ್ಮಿಕ ರಘು ಅವರ ಪತ್ನಿ ಅನುಸೂಯಾ ಅವರಿಗೂ ವಾಂತಿ ಆಗಿದೆ. ಅವರು ಸ್ಥಳೀಯ ಕ್ಲಿನಿಕ್ನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಗಳು ಕಾವ್ಯ ಅಕ್ಕನ ಮನೆಯಲ್ಲಿ ಓದುತ್ತಿದ್ದು, ಮಗ ಕಾರ್ತಿಕ್ ಕೆಲಸದ ಮೇಲೆ ಹೊರಗೆ ಹೋಗಿದ್ದರಿಂದ ಅವರಿಗೆ ತೊಂದರೆಯಾಗಿಲ್ಲ ಎಂದು ಅನುಸೂಯಾ ಹೇಳಿದರು.
ಇನ್ನೂ ಈ ಭಾಗದಲ್ಲಿ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿರುವ ಹಿನ್ನೆಲೆ, ಜೆಸಿಬಿಯಿಂದ ಚರಂಡಿ ದುರಸ್ತಿ ವೇಳೆ ಪಕ್ಕದಲ್ಲಿಯೇ ಹಾಯ್ದು ಹೋಗಿರುವ ಪೈಪ್ ಒಡೆದು ಚರಂಡಿಯಲ್ಲಿನ ಕೈಗಾರಿಕೆಯ ತ್ಯಾಜ್ಯ ಕುಡಿಯುವ ನೀರಿನ ಪೈಪ್ನಲ್ಲಿ ಸೇರಿಕೊಂಡಿದೆ ಎಂದು ಸಾರ್ವಜನಿಕರಿಂದ ಕೇಳಿ ಬಂದಿದೆ. ರಾಜ್ಯದ ಅನೇಕ ಭಾಗಗಳಲ್ಲಿ ಈ ರೀತಿಯ ನೀರಿನ ಸಮಸ್ಯೆ ತಲೆದೋರಿದ್ದು, ಘಟನಾ ಕುರಿತಂತೆ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಸಂಬಂಧ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಂಡು, ಸಾರ್ವಜನಿಕರಿಗೆ ಯಾವುದೇ ಸಮಸ್ಯೆಗಳುಂಟಾಗದಂತೆ ನೋಡಿಕೊಳ್ಳಬೇಕೆಂದು ಸಾರ್ವಜನಿಕರು ವಿನಂತಿಸಿದ್ದಾರೆ.