ಬೆಳ್ತಂಗಡಿ: ಶಿಬಾಜೆ ಗ್ರಾಮದ ಬರ್ಗುಳದಲ್ಲಿ ಮೇ.20 ರಂದು ಶೀನ ಎಂಬವರ ಮನೆ ಸಮೀಪ ನೀರು ಹರಿಯುವ ತೋಡಿನಲ್ಲಿ ಸಂಪೂರ್ಣವಾದ ಕೊಳೆತ ಸ್ಥಿತಿಯಲ್ಲಿ ಗಂಡಸಿನ ಮೃತದೇಹವೊಂದು ಪತ್ತೆಯಾಗಿತ್ತು.
ದೇಹದ ಭಾಗಗಳು ಸಂಪೂರ್ಣ ಕೊಳೆತು ಹೋದಂತಿದ್ದು ಯಾವುದೇ ಗುರುತು ಪತ್ತೆಯಾಗಿರಲಿಲ್ಲ.ಧರ್ಮಸ್ಥಳ ಠಾಣೆಯ ಎಸ್.ಐ ಸಮರ್ಥ್ ಆರ್ ಗಾಣಿಗೇರ ಅವರ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ಸ್ಥಳದಲ್ಲಿ ಸಿಕ್ಕಿದ ಶರ್ಟ್ ಒಂದರ ಆಧಾರದಲ್ಲಿ ಪರಿಶೀಲನೆ ನಡೆಸಿದಾಗ ಶಿಬಾಜೆ ಗ್ರಾಮದ ಪತ್ತಿಮಾರು ನಿವಾಸಿಯಾಗಿರುವ ವೆಂಕಪ್ಪ ಪೂಜಾರಿ ಮಗ ಪ್ರಸಾದ್ ಪುಜಾರಿ (37) ಎಂಬವರು ಎಂದು ಗುರುತಿಸಿದ್ದಾರೆ. ಮೃತನ ತಂದೆ ವೆಂಕಪ್ಪ ಪೂಜಾರಿ ಅವರು ಮೃತನ ಗುರುತನ್ನು ಪತ್ತೆ ಹಚ್ಚಿದ್ದಾರೆ.

ಈತ ವಿಪರೀತ ಕುಡಿತದ ಚಟ ಹೊಂದಿದ್ದ ಎನ್ನಲಾಗಿದ್ದು ನಾಲ್ಕು ದಿನಗಳಿಂದ ಮನೆಗೆ ಬಂದಿರಲಿಲ್ಲ ಎಂದು ತಿಳಿದು ಬಂದಿದೆ. ಈ ರೀತಿ ಈತ ಹಿಂದೆಯೂ ಮನೆ ಬಿಟ್ಟು ಹೋಗುತ್ತಿದ್ದ ಎಂದು ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.