ಮಂಗಳೂರು: ‘ದಸ್ಕತ್’ ತುಳು ಸಿನಿಮಾ ತುಳುನಾಡಿನಲ್ಲಿ ಭಾರೀ ಸಂಚಲನವನ್ನುಂಟು ಮಾಡಿದ್ದು, ಇದೀಗ ಕನ್ನಡದಲ್ಲಿ ತೆರೆಕಾಣಲು ಸಜ್ಜಾಗುತ್ತಿದೆ. ಕಾಮಿಡಿ ಕಿಲಾಡಿ ಖ್ಯಾತಿಯ ಅನೀಶ್ ಪೂಜಾರಿ ವೇಣೂರು ಅವರ ನಿರ್ದೇಶನದಲ್ಲಿ ʼದಸ್ಕತ್ʼ ಸಿನಿಮಾ ಬಿಡುಗಡೆಗೊಂಡಿದ್ದು, ಇದೀಗ 25 ದಿನದ ಸಂಭ್ರಮದಲ್ಲಿದೆ.
ಇನ್ನು ಬೆಂಗಳೂರಿನ ಚಿತ್ರಮಂದಿರಗಳಲ್ಲಿ ಈ ಸಿನಿಮಾ ತೆರೆಕಾಣಲಿದ್ದು, ನಿರ್ಮಾಪಕ ಜಗದೀಶ್.ಎನ್ ಅವರು ಸಿನಿಮಾ ನೋಡಿ ಹಕ್ಕು ಪಡೆದುಕೊಂಡಿದ್ದಾರೆ. ಅಷ್ಟೇಅಲ್ಲದೆ ಸಿನಿಮಾವು ಪ್ಯಾನ್ ಇಂಡಿಯಾ ರೈಟ್ಸ್ ಪಡೆದಿದ್ದು, ಸದ್ಯ ಕನ್ನಡದಲ್ಲಿ ರಿಲೀಸ್ ಆಗಲಿದೆ. ಡಬ್ಬಿಂಗ್ ಕೆಲಸಗಳು ಆರಂಭವಾಗಿದ್ದು, ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಅನೀಶ್ ಸುದ್ದಿಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮಾಜಿ ಸಚಿವರಾದ ಕೃಷ್ಣ ಜೆ.ಪಾಲೆಮಾರ್ ಅರ್ಪಿಸುವ ಸೆವೆಂಟಿ ಸೆವೆನ್ ಸ್ಟುಡಿಯೋಸ್ ರಾಘವೇಂದ್ರ ಕುಡ್ವರವರ ನಿರ್ಮಾಣದಲ್ಲಿ ದಸ್ಕತ್ ತುಳು ಸಿನಿಮಾ ಮೂಡಿಬಂದಿದೆ. ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಪ್ರಜ್ಞೇಶ್ ಶೆಟ್ಟಿ ಕಾರ್ಯ, ಛಾಯಾಗ್ರಹಣವ್ನು ಸಂತೋಷ್ ಆಚಾರ್ಯ ಗುಂಪಲಾಜೆ, ಸಂಕಲನವನ್ನು ಗಣೇಶ್ ನೀರ್ಚಾಲ್ ಮಾಡಿದ್ದು, ಸಮರ್ಥನ್ ಎಸ್.ರಾವ್ ಅವರ ಸಂಗೀತವನ್ನು ಕೂಡ ನಾವಿಲ್ಲಿ ಕಾಣಬಹುದಾಗಿದೆ.
ನೀನಾದೇ ನಾ ಧಾರಾವಾಹಿ ಖ್ಯಾತಿಯ ಭವ್ಯ ಪೂಜಾರಿ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ದೀಕ್ಷಿತ್ ಕೆ ಅಂಡಿಂಜೆ, ಚಂದ್ರಹಾಸ್ ಉಲ್ಲಾಳ್, ಯುವ ಶೆಟ್ಟಿ, ಮೋಹನ್ ಶೇಣಿ, ದೀಪಕ್ ರೈ ಪಾಣಾಜೆ, ನೀರಜ್ ಕುಂಜರ್ಪ, ಮಿಥುನ್ ರಾಜ್ ತಿಮ್ಮಪ್ಪ ಕುಲಾಲ್, ಯೋಗಿಶ್ ಶೆಟ್ಟಿ, ಚೇತನ್ ಪಿಲಾರ್ ಸೇರಿ ಅನೇಕ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.