ಮೈಸೂರಿನಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ. ದಸರಾಗೆ ಭರ್ಜರಿ ತಯಾರಿ ಕೂಡ ನಡೆಯುತ್ತಿದೆ. ಗಜಪಡೆ ಕೂಡ ಭರ್ಜರಿ ತಾಲೀಮಿನಲ್ಲಿ ನಿರತವಾಗಿವೆ. ಹೀಗಿರುವಾಗಲೇ ನಿನ್ನೆ ಆನೆಗಳು ರಾತ್ರಿ ಪುಂಡಾಟ ನಡೆಸಿವೆ. ಆನೆಗಳ ಪುಂಡಾಟಕ್ಕೆ ಜನ ಬೆಚ್ಚಿ ಬಿದ್ದಿದ್ದಾರೆ.
ದಸರಾ ಆನೆಗಳಾದ ಧನಂಜಯ್ ಹಾಗೂ ಕಂಜನ್ ಗೆ ನಿನ್ನೆ ರಾತ್ರಿ ಊಟ ಕೊಡುವ ವೇಳೆ ಜಗಳವಾಗಿತ್ತು. ಊಟ ಕೊಡುವ ವೇಳೆ ಹೆಣ್ಣಾನೆ ಪಕ್ಕದಲ್ಲಿ ಇಲ್ಲದೇ ಇದ್ದದ್ದರಿಂದ ಕೋಪಗೊಂಡ ಧನಂಜಯ ಕಂಜನ್ ಆನೆ ಜೊತೆ ಖ್ಯಾತೆ ತೆಗೆದಿದ್ದಾನೆ.
ಈ ವೇಳೆ ಭಯದಿಂದ ಕಂಜನ್ ಆನೆ ಕಟ್ಟಿದ್ದ ಸರಪಳಿ ಕಿತ್ತುಕೊಂಡು ಅರಮನೆ ಅಂಗಳದಲ್ಲಿ ಓಡಾಡಿದ್ದಾನೆ. ಹಿಂದೆಯಿಂದ ಧನಂಜಯ ಕಂಜನ್ನನ್ನು ಬೆದರಿಸುತ್ತ ಓಡಿದ್ದಾನೆ. ಇದರಿಂದ ಮತ್ತಷ್ಟು ಹೆದರಿದ ಕಂಜನ್ ಜಯಮಾರ್ತಾಂಡ ದ್ವಾರದ ಮೂಲಕ ದೊಡ್ಡಕೆರೆ ಮೈದಾನದ ಬಳಿಯ ರಸ್ತೆಯತ್ತ ಓಡಿದ್ದಾನೆ.ಈ ವೇಳೆ ರಸ್ತೆಯಲ್ಲಿದ್ದ ಜನರು ಆನೆಗಳ ಈ ವರ್ತನೆಗೆ ಹೆದರಿ ಎದ್ನೋ ಬಿದ್ನೋ ಎಂದು ಓಡಿದ್ದಾರೆ. ಬಳಿಕ ರಸ್ತೆಯಲ್ಲಿನ ವಾಹನ ಕಂಡು ಕಂಜನ್ ನಿಂತಿದ್ದಾನೆ. ಮಾವುತ- ಕಾವಾಡಿಗಳ ಚಾಣಾಕ್ಷತದಿಂದ ಅದನ್ನು ಸಮಾಧಾನ ಪಡಿಸಿ ಒಳಗೆ ಕರೆದುಕೊಂಡು ಹೋಗಿದ್ದಾರೆ.ಗಜಪಯಣ ಮೂಲಕ ಮೈಸೂರಿಗೆ ಕರೆತಂದಾಗ ಲಾರಿಯಿಂದ ಕೆಳಗಿಳಿಯಬೇಕಾದರೆ ಕಂಜನ್ ಕಾಲಿಗೆ ಪೆಟ್ಟಾಗಿದ್ದರಿಂದ ಗಜಪಡೆಯ ಎಲ್ಲಾ ತಾಲೀಮಿನಿಂದ ವಿನಾಯಿತಿ ನೀಡಿ ಚಿಕಿತ್ಸೆ ಕೊಡಲಾಗಿತ್ತು. ವಾರದ ಹಿಂದೆಯಷ್ಟೇ ಚೇತರಿಸಿಕೊಂಡಿದ್ದ ಕಂಜನ್ ವ್ಯತಿರಿಕ್ತವಾಗಿ ವರ್ತಿಸಿರುವುದು ಆತಂಕಕ್ಕೆ ಕಾರಣವಾಗಿದೆ.ಆದರೆ ಪಶುವೈದ್ಯರು ಆತಂಕ ಪಡುವ ಅಗತ್ಯ ಇಲ್ಲ ಆನೆಗಳಿಗೆ ಮದ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


