ಬೆಳ್ತಂಗಡಿ : ಉಜಿರೆಯ ಅಳಕ್ಕೆ ಎಂಬಲ್ಲಿ ನಿವೇಶನ ವಿಚಾರವಾಗಿ ನಡೆದ ಆದಿವಾಸಿ ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿ ತಕ್ಕ ಶಿಕ್ಷೆ ನೀಡದಿದ್ದಲ್ಲಿ ಎ.27 ರಿಂದ ಜನವಾದಿ ಮಹಿಳಾ ಸಂಘಟನೆ, ದಲಿತ ಹಕ್ಕುಗಳ ರಕ್ಷಣಾ ಸಮಿತಿ, ಆದಿವಾಸಿ ಹಕ್ಕುಗಳ ರಕ್ಷಣಾ ಸಮಿತಿ ವತಿಯಿಂದ ನ್ಯಾಯ ಸಿಗುವವರೆಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ದ.ಕ ಜಿಲ್ಲಾ ದಲಿತ ಹಕ್ಕುಗಳ ರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಈಶ್ವರಿ ಪದ್ಮುಂಜ ಹೇಳಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಿಂದೂ ನಾವೆಲ್ಲ ಒಂದು. ಮಹಿಳೆಯರೆಂದರೆ ಮಾತೆಗೆ ಸಮಾನರು ಎಂದು ಬಾಯಿಯಲ್ಲಿ ಉಪದೇಶ ಮಾಡುತ್ತಾ ಹಿಂದೂ ಧರ್ಮದ ರಕ್ಷಕರು ಎಂದು ನಾಟಕ ಮಾಡುವ ಬಿಜೆಪಿ ಮುಖಂಡರುಗಳು ಮಹಿಳೆಯರ ಮೇಲೆ ದೌರ್ಜನ್ಯ ಆಗುತ್ತಿದ್ದರೂ ಅದಕ್ಕೆ ಬೆಂಬಲಿಸಿ ವಿಡಿಯೋ ಚಿತ್ರೀಕರಣ ಮಾಡುತ್ತಾ ಕುಳಿತಿರುವ ಇವರ ಮನಸ್ಥಿತಿ ಯಾವ ರೀತಿ ಇದೆ ಎಂಬುದನ್ನು ಸಾರ್ವಜನಿಕರು ತಿಳಿಯಬೇಕಾಗಿದೆ.
ಅಕ್ಕ, ತಂಗಿ, ತಂದೆ ತಾಯಿ, ಹೆಂಡತಿ ಎಂಬ ಬೇಧ ಭಾವವನ್ನು ತಿಳಿಯದ ಈ ಹೇಯ ಕೃತ್ಯ ಇಡೀ ದೇಶವೇ ತಲೆತಗ್ಗಿಸುವಂತದ್ದಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ಗೌರವ ಸ್ಥಾನ ನೀಡಲಾಗಿದೆ ಎನ್ನುತ್ತಲೇ ಮಹಿಳೆಯರಿಗೆ ಅನ್ಯಾಯ ಮಾಡುತ್ತಾ ಬಂದಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ.
ಒಂದು ಅಮಾಯಕ ಕುಟುಂಬದ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಬಿಜೆಪಿ ಪಕ್ಷ ಮೌನವಾಗಿ ಆರೋಪಿಗಳ ಪರ ನಿಂತಿರುವುದು ಕಂಡರೆ ಮಹಿಳೆಯರಿಗೆ ನ್ಯಾಯ ಎಲ್ಲಿದೆ ಎಂದು ಪ್ರಶ್ನಿಸಬೇಕಾಗಿದೆ ಎಂದರು.
ಗುರಿಪಳ್ಳ ಅಳಕ್ಕೆ ನಿವಾಸಿ ಜ್ಯೋತಿ ಮಾತನಾಡಿ ಅಮಾಯಕರಾದ ನಮ್ಮ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಯುತ್ತಿದ್ದರೂ ಬಿಜೆಪಿ ಪಕ್ಷದ ಮುಖಂಡ ಚೆನ್ನಕೇಶವ ಅವರು ಹಲ್ಲೆಯನ್ನು ತಡೆಯಲೆತ್ನಿಸದೇ ಹಲ್ಲೆಗೆ ಪ್ರಚೋಧನೆ ನೀಡುತ್ತಿದ್ದರು. ಸಹೋದರಿಯನ್ನು ಅರೆಬೆತ್ತಲೆ ಗೊಳಿಸಿ ಅದನ್ನು ವೀಡಿಯೋ ಚಿತ್ರೀಕರಣ ಮಾಡುತ್ತಾ ನಿಂಧಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಹಲ್ಲೆ ಎಂಬುದು ಪೂರ್ವ ನಿಯೋಜಿತ ಕೃತ್ಯವಾಗಿದ್ದು ಆರೋಪಿಗಳನ್ನು ಬಂಧಿಸಿ ತಮಗೆ ನ್ಯಾಯ ಕೊಡಿಸಬೇಕು ಇನ್ನು ಇವರು ಎಂದಿಗೂ ಅಮಾಯಕ ಮಹಿಳೆಯರ ಮೇಲಿನ ದೌರ್ಜನ್ಯ ಮಾಡಲು ಮುಂದಾಗದ ರೀತಿಯಲ್ಲಿ ಅವರ ವಿರುದ್ದ ಕ್ರಮ ಕೈಗೊಳ್ಳಬೇಕು ಇದು ಇಲ್ಲಿಗೆ ಕೊನೆಯಾಗಬೇಕು ಎಂದರು.
ಜೆ.ಎಂ ಎಸ್ ಮುಖಂಡರುಗಳಾದ ಕಿರಣಪ್ರಭ, ಕಾರ್ಯದರ್ಶಿ ಕುಮಾರಿ ಲಾಯಿಲ, ಆದಿವಾಸಿ ಹಕ್ಕುಗಳ ಹೋರಾಟಗಾರರಾದ ತನಿಯಪ್ಪ ಎಂ.ಕೆ,ಹರ್ಷಿತಾ, ಅನಿತಾ, ಮೊದಲಾದವರು ಉಪಸ್ಥಿತರಿದ್ದರು.