ಮಂಗಳೂರು: ನಗರದ ತಣ್ಣೀರುಬಾವಿ ಸಮುದ್ರ ತೀರದ ಎಂಆರ್ಪಿಎಲ್ ಕಂಪೆನಿಯ ಉಪ್ಪು ನೀರು ಶುದ್ಧೀಕರಣ ಘಟಕದ ಪೈಪ್ಲೈನ್ ಜೋಡಣೆಯ ಪ್ರದೇಶದಲ್ಲಿ ನಿನ್ನೆ ಸಂಜೆ ಬೀಸಿದ ಗಾಳಿಗೆ ದೋಣಿಯೊಂದು ಮಗುಚಿ ಬಿದ್ದು ಓರ್ವ ಮೃತಪಟ್ಟಿರುವ ಘಟನೆ ನಡೆದಿದೆ.
ಮೂಡಬಿದ್ರೆಯ ಸಂತೋಷ್ ಪೂಜಾರಿ(39) ಮೃತ ದುರ್ದೈವಿ . ಈ ಘಟನೆಯಲ್ಲಿ ಮಹಾರಾಷ್ಟ್ರದ ಹರಿಪ್ರಭಾಕರ್ ಭಗತ್(32) ಎಂಬಾತ ನಾಪತ್ತೆಯಾಗಿದ್ದಾನೆ.
ಘಟನೆಯ ವಿವರ:
ಎಂಆರ್ಪಿಎಲ್ ಕಂಪೆನಿ ತಣ್ಣೀರುಬಾವಿ ಸಮುದ್ರ ತೀರದಲ್ಲಿ ಉಪ್ಪು ನೀರು ಶುದ್ಧೀಕರಣ ಘಟಕವನ್ನು ಸ್ಥಾಪಿಸುತ್ತಿದ್ದು, ಖಾಸಗಿ ಸಂಸ್ಥೆಯೊಂದು ಅದರ ಗುತ್ತಿಗೆ ವಹಿಸಿಕೊಂಡಿದೆ. ಇದೀಗ ಪೈಪ್ಲೈನ್ ಕಾಮಗಾರಿ ನಡೆಯುತ್ತಿದ್ದು, ಈ ಪ್ರದೇಶದಲ್ಲಿ ಮೀನುಗಾರಿಕಾ ದೋಣಿಗಳು ಬಂದು ಪೈಪ್ಲೈನ್ಗೆ ಅಡಚಣೆ ಆಗುವುದು ಬೇಡ ಎಂದು ಮಾಹಿತಿ ನೀಡಲು ದೋಣಿಯೊಂದನ್ನು ಕಾವಲು ಇರಿಸಲಾಗಿತ್ತು. ಈ ದೋಣಿಯಲ್ಲಿ ಉತ್ತರ ಭಾರತ ಮೂಲದ 5 ಜನ ಕಾರ್ಮಿಕರು ಕಾವಲು ಕಾಯುತ್ತಿದ್ದರು. ಸಂಜೆ ಸುಮಾರು 7 ಗಂಟೆ ವೇಳೆಗೆ ಕಾಮಗಾರಿ ಮುಗಿದು ವಾಪಸಾಗುತ್ತಿದ್ದ ವೇಳೆ ಸಮುದ್ರದ ಕಡೆಯಿಂದ ಬೀಸಿದ ಬಲವಾದ ಗಾಳಿಗೆ ಈ ದೋಣಿ ಮಗುಚಿ ಬಿದ್ದು ಈ ದುರ್ಘಟನೆ ಸಂಭವಿಸಿದೆ.
ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.