ಅರಂತೋಡು, ಮೇ 18: ಕೊಡಗು ಜಿಲ್ಲೆಯ ಪೆರಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಇಂದಿರಾ ಅವಾಜ್ ಕಾಲೋನಿ ನಿವಾಸಿ ವೃದ್ದ ದೇರಣ್ಣ ಗೌಡ(72) ನಿನ್ನೆ ಮೃತಪಟ್ಟಿದ್ದು ಅಲ್ಲಿ ಸ್ಮಶಾನವಿಲ್ಲದೆ ಸುಳ್ಯ ತಾಲೂಕಿನ ಕೊಡಿಯಾಲ ಬೈಲು ರುದ್ರಭೂಮಿಯಲ್ಲಿ ತಂದು ಶವದ ಅಂತ್ಯ ಸಂಸ್ಕಾರ ನಡೆಸಲಾದ ಘಟನೆ ವರದಿಯಾಗಿದೆ.
ಪೆರಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ಮಶಾನಕ್ಕೆ ಈ ಹಿಂದೆ ಕೊಡಗಿನ ಕಂದಾಯ ಇಲಾಖೆ ಜಾಗ ಗರುತಿಸಿ ಕೊಡುವುದಾಗಿ ಹೇಳಿತ್ತು ಆದರೂ ಜಾಗವನ್ನು ಗರುತಿಸಿ ಪೆರಾಜೆ ಗ್ರಾಮ ಪಂಚಾಯತ್ಗೆ ಹಸ್ತಾಂತರ ಮಾಡಿರಲಿಲ್ಲ. ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಕುಂದಲ್ಪಾಡಿ ಅವರು ಶವ ಸಂಸ್ಕಾರ ಮಾಡಲು ಸ್ಥಳೀಯವಾಗಿ ಸಾಕಷ್ಟು ಪ್ರಯತ್ನ ಪಟ್ಟರು ಅಲ್ಲದೆ ಮಡಿಕೇರಿ ತಹಶೀಲ್ದಾರ್ ಅವರನ್ನು ಸಂಪರ್ಕಿಸಿ ಪೆರಾಜೆಯಲ್ಲಿ ಜಾಗ ಗುರುತಿಸಿ ಸ್ಥಳೀಯ ಗ್ರಾಮ ಪಂಚಾಯತ್ ಗೆ ಹಸ್ತಾಂತರ ಮಾಡದಿರುವ ಬಗ್ಗೆ ತಹಶೀಲ್ದಾರ್ ಅವರನ್ನು ತರಾಟೆಗೆತ್ತಿಕೊಂಡರೆನ್ನಲಾಗಿದೆ.
ಬಳಿಕ ಕಂದಾಯ ಇಲಾಖೆಯವರು ಮೃತರ ಮನೆಗೆ ಬಾರದೆ ಅರ್ಧದಿಂದ ಹಿಂದಿರುಗಿ ಹೋದರರು ಎಂದು ತಿಳಿದು ಬಂದಿದೆ. ಮೃತರು ಪತ್ನಿ, ಪುತ್ರ,ಪತ್ರಿಯನ್ನು ಅಗಲಿದ್ದಾರೆ.