ಬೆಳ್ತಂಗಡಿ : ದಕ್ಷಿಣಕನ್ನಡಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನಲೆ ಜಿಲ್ಲಾಡಳಿತ ವಿಕೇಂಡ್ ಕರ್ಫ್ಯೂ ಹೇರಿದ್ದರೂ ಧರ್ಮಸ್ಥಳದಲ್ಲಿ ನಿನ್ನೆ ಜನ ಜಾತ್ರೆಯೇ ಕಂಡು ಬಂತು.
ಶುಕ್ರವಾರ ರಾತ್ರಿ 9 ರಿಂದ ಇಂದು ಬೆಳಗ್ಗೆ 6 ಗಂಟೆಯ ತನಕ ಮೆಡಿಕಲ್, ಆಸ್ಪತ್ರೆ, ಪತ್ರಿಕೆ ಹಾಲು, ತರಕಾರಿ, ದಿನಸಿ ಅಂಗಡಿ , ಬಾರ್ , ವೈನ್ ಶಾಪ್ ಹೊರತುಪಡಿಸಿ ಸಂಪೂರ್ಣ ಬಂದ್ ಮಾಡಲು ಆದೇಶಿಸಲಾಗಿತ್ತು. ಜೊತೆಗೆ ಧರ್ಮಸ್ಥಳ, ಸುಬ್ರಹ್ಮಣ್ಯ, ಕಟೀಲು ದೇಗುಲಗಳನ್ನು ಮುಚ್ಚುವ ಜೊತೆಗೆ ಅನ್ನದಾನ ಸ್ಥಗಿತ ಸೇರಿದಂತೆ ಬಾಡಿಗೆ ರೂಂಗಳನ್ನು ನೀಡದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿತ್ತು. ಆದರೆ ಆದೇಶಕ್ಕೆ ಯಾವುದೇ ಬೆಲೆ ಇಲ್ಲದಂತಾಗಿತ್ತು.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರ್ಶನ ಹೊರತುಪಡಿಸಿ ಅನ್ನದಾನ , ರೂಂ ಬಾಡಿಗೆ ನಿಲ್ಲಿಸಲಾಗಿತ್ತು. ಆದರೂ ಶನಿವಾರ ಹಾಗೂ ನಿನ್ನೆ ಜನ ಸಾಗರವೇ ಹರಿದು ಬಂದಿತ್ತು. ಧರ್ಮಸ್ಥಳದಲ್ಲಿ ಉಚಿತ ಅನ್ನಛತ್ರ ಸ್ಥಗಿತಗೊಂಡಿದ್ದಲ್ಲದೇ ಜೊತೆಗೆ ಹೋಟೆಲ್ ಗಳು ಬೀಗ ಹಾಕಿದ ಕಾರಣ ಖಾಲಿ ಹೊಟ್ಟೆಯಲ್ಲಿ ಇರುವಂತಾಗಿತ್ತು. ರೂಂ ಸಿಗದ ಕಾರಣ ಬಸ್ ನಿಲ್ದಾಣ, ಅಂಗಡಿ ಸೇರಿದಂತೆ ಸಿಕ್ಕ ಸಿಕ್ಕ ಕಡೆಗಳಲ್ಲಿ ಗಾಳಿ ಮಳೆಯನ್ನು ಲೆಕ್ಕಿಸದೆ ಸಣ್ಣ ಮಕ್ಕಳು, ವೃದ್ಧರು ಸೇರಿದಂತೆ ಮಲಗಿರುವ ದೃಶ್ಯ ಕಂಡು ಬಂದಿತ್ತು.
ತಾಲೂಕಿನ ಎಲ್ಲಾ ಗಡಿಗಳಲ್ಲಿ ತಪಾಸಣೆ ಕೇಂದ್ರಗಳಿದ್ದರೂ ನೂರಾರು ಕಾರುಗಳಲ್ಲಿ ಜನರು ಆಗಮಿಸಿದ್ದಾರೆ. ಜೊತೆಗೆ ದೂರದೂರಿನಿಂದ ಖಾಸಗಿ ಜೊತೆಗೆ ಸರ್ಕಾರಿ ಬಸ್ ಗಳ ಮೂಲಕ ನೂರಾರು ಜನರು ಆಗಮಿಸಿದರು. ಯಾರ ನಿರ್ಲಕ್ಷ್ಯ…? ದಕ ಜಿಲ್ಲೆಯಲ್ಲಿ ಕೋವಿಡ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿಗಳಲ್ಲಿ ತಪಾಸಣೆ ನಡೆಸಲಾಗುತ್ತಿದ್ದರೂ ಹೇಗೆ ಇಷ್ಟೊಂದು ಜನರು ಖಾಸಗಿ ವಾಹನಗಳಲ್ಲಿ ಬಂದಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಇಲ್ಲದಾಗಿದೆ. ಜಿಲ್ಲಾಡಳಿತ ಕೂಡ ಜಿಲ್ಲೆಯ ಕೇವಲ ಮೂರು ದೇವಾಲಯಗಳಿಗೆ ಮಾತ್ರ ಕಡಿವಾಣ ಹಾಕಿದ್ದು , ಇನ್ನುಳಿದಂತೆ ಆಟಿ ಅಮಾವಾಸ್ಯೆಯಂದು ತಾಲೂಕಿನಾದ್ಯಂತ ದೇವಸ್ಥಾನಗಳಲ್ಲಿ ಮಾಸ್ಕ್ , ಸಾಮಾಜಿಕ ಅಂತರವಿಲ್ಲದೆ ಸಾವಿರಾರು ಜನರು ಭಾಗವಹಿಸಿದ್ದರು. ಇದಕ್ಕೆ ಹೊಣೆ ಯಾರು ? ಎಂಬ ಪ್ರಶ್ನೆಗೆ ಉತ್ತರ ನೀಡುವವರಾರು…?