ಬೆಳ್ತಂಗಡಿ: ಜಾನುವಾರುಗಳನ್ನು ಅಕ್ರಮವಾಗಿ ಈಚರ್ ಲಾರಿಯೊಂದರಲ್ಲಿ ಸಾಗಿಸುತ್ತಿದ್ದಾಗ ಮಿಂಚಿನ ಕಾರ್ಯಾಚರಣೆ ನಡೆಸಿದ ಭಜರಂಗದಳ ಕಾರ್ಯಕರ್ತರು ದನದೊಂದಿಗೆ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಉಜಿರೆ-ಧರ್ಮಸ್ಥಳ ರಸ್ತೆಯ ನೇತ್ರಾವತಿ ಬಳಿ ನಡೆದಿದೆ.
ಧರ್ಮಸ್ಥಳ ಗ್ರಾಮದ ನೇತ್ರಾವತಿ ಬಳಿಯಲ್ಲಿ ಭಜರಂಗದಳದ ಕಾರ್ಯಕರ್ತರು ಅಕ್ರಮ ಗೋ ಸಾಗಾಟದ ವಾಹನವನ್ನು ನಿಲ್ಲಿಸಿ ಪೋಲೀಸರಿಗೆ ಮಾಹಿತಿಯನ್ನು ನೀಡಿದ್ದು ಸ್ಥಳಕ್ಕೆ ಬೆಳ್ತಂಗಡಿ ಎಸ್ ಐ ನಂದಕುಮಾರ್ ಹಾಗೂ ಧರ್ಮಸ್ಥಳ ಎಸ್ ಐ ಪವನ್ ಕುಮಾರ್ ಧಾವಿಸಿ ಅಕ್ರಮ ಗೋ ಸಾಗಾಟಗಾರರನ್ನು ಬಂಧಿಸಿ ವಾಹನವನ್ನು ಮುಟ್ಟುಗೋಲು ಹಾಕಿದ್ದಾರೆ.
ಆರೋಪಿಗಳಾದ ಅಂಡಿಂಜೆ ಗ್ರಾಮದ ಅಬ್ದುಲ್ ಸಲಾಂ ಜಿ.(30), ಸಾವ್ಯ ಗ್ರಾಮದ ನೆಲ್ಲಿಗುಡ್ಡೆ ಮನೆ ಎಂ.ಅಕ್ಬರ್ (26) ಸಾವ್ಯ ಗ್ರಾಮದ ದರ್ಖಾಸು ಮನೆ ಸಂಜೀವ ಪೂಜಾರಿ (41) ಬಂಧಿತ ಆರೋಪಿಗಳಾಗಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಲಂ: 379, ಕಲಂ: 34 ಐ.ಪಿ.ಸಿ, ಕಲಂ:5,7,9,11 ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ ಅಡಿ ದೂರು ದಾಖಲು ಮಾಡಲಾಗಿದೆ.