ಮಂಗಳೂರು: ದಂಪತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಪಿಲಾರು ಎಂಬಲ್ಲಿ ಇಂದು ಮದ್ಯಾಹ್ನ ವೇಳೆ ಬೆಳಕಿಗೆ ಬಂದಿದೆ.

ಪಿಲಾರು ನಿವಾಸಿ ಶಿವಾನಂದ ಪೂಜಾರಿ (55) ಮೃತದೇಹ ತೋಟದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದರರೆ ಪತ್ನಿ ಶೋಭಾ ಪೂಜಾರಿ(45) ಮೃತದೇಹ ಮನೆಯ ಕೋಣೆಯಲ್ಲಿ ಮಲಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮಧ್ಯಾಹ್ನ ದಂಪತಿ ಪುತ್ರ ಕಾರ್ತಿಕ್ ಎಂಬವರು ತಾಯಿಗೆ ಕರೆ ಮಾಡಿದಾಗ, ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಸಮೀಪದ ಮಹಿಳೆಯಲ್ಲಿ ವಿಚಾರಿಸಿದ್ದಾರೆ. ಅವರು ಮನೆಯೊಳಗೆ ಬಂದಾಗ ಶೋಭಾ ಮೃತದೇಹ ಪತ್ತೆಯಾಗಿದೆ. ಸ್ವಲ್ಪ ಹೊತ್ತಿನಲ್ಲಿ ಶಿವಾನಂದಮ ಪೂಜಾರಿ ಮೃತದೇಹ ಸಮೀಪದ ತೋಟದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೇಲ್ನೋಟಕ್ಕೆ ಸಂಶಯ ಸ್ವಭಾವದ ಶಿವಾನಂದ್, ಪತ್ನಿಯ ಕತ್ತುಹಿಸುಕಿ ಹತ್ಯೆ ನಡೆಸಿ ನಂತರ ತಾನೂ ತೋಟದಲ್ಲಿ ನೇಣುಬಿಗಿದು ಆತ್ಮಹತ್ಯೆ ನಡೆಸಿರುವುದಾಗಿ ಹೇಳಲಾಗುತ್ತಿದೆ.

ಘಟನಾ ಸ್ಥಳಕ್ಕೆ ಫಾರೆನ್ಸಿಕ್ ತಂಡ ಭೇಟಿ ನೀಡಿ ಎರಡು ಮೃತದೇಹಗಳನ್ನು ಪರಿಶೀಲಿಸುತ್ತಿದ್ದಾರೆ. ಎಸಿಪಿ ದಿನಕರ್ ಶೆಟ್ಟಿ ನೇತೃತ್ವದಲ್ಲಿ ಉಳ್ಳಾಲ ಪೊಲೀಸ್ ಠಾಣೆಯ ತಂಡ ತನಿಖೆ ಕೈಗೆತ್ತಿಕೊಂಡಿದೆ. ಫಾರೆನ್ಸಿಕ್ ತಂಡ ನೀಡಿದ ವರದಿ ನಂತರವಷ್ಟೇ ಶೋಭಾ ಕೊಲೆ ಎಂಬುದುನ್ನು ಸ್ಪಷ್ಟಪಡಿಸಬಹುದು ಅನ್ನುವ ಮಾಹಿತಿಯನ್ನು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.