ಮಂಗಳೂರು: ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ಆಸ್ಪತ್ರೆಗೆ ಹೋಗಲು ಒಪ್ಪದೆ ಓಡಿ ಹೋಗಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳೂರಿನ ಟವರ್ ಕ್ಲಾಕ್ ಬಳಿ ನಡೆದಿದೆ. ಆಸ್ಪತ್ರೆಗೆ ದಾಖಲಾಗಲು ಆ್ಯಂಬ್ಯುಲೆನ್ಸ್ ಬಂದಾಗ ಭೀತಿಗೊಳಗಾದ ಸೋಂಕಿತ ಓಡಲು ಯತ್ನಿಸಿದ್ದಾನೆ.
ಉತ್ತರಾಖಂಡ್ ರಾಜ್ಯದ ಕೂಲಿಕಾರ್ಮಿಕನೋರ್ವ ನಗರದ ಹಂಪನಕಟ್ಟೆಯ ಸಮೀಪ ನಿರ್ಮಾಣ ಹಂತದ ಕಟ್ಟಡದಲ್ಲಿ ಹಲವು ದಿನಗಳಿಂದ ಕೆಲಸ ಮಾಡುತ್ತಿದ್ದ. ಈತನಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈತನ ಗಂಟಲು ದ್ರವ ಮಾದರಿ ವರದಿಯಲ್ಲಿ ಸೋಂಕು ಇರುವುದು ದೃಢಪಟ್ಟಿತ್ತು.
ವಿಷಯ ತಿಳಿದ ಆರೋಗ್ಯ ಇಲಾಖೆಯ ಅಧಿಕಾರಿಗಳು ಸೋಂಕಿತನನ್ನು ಕರೆದೊಯ್ಯಲು ಆಗಮಿಸಿದ್ದರು. ಸೋಂಕಿತನನ್ನು ಆ್ಯಂಬುಲೆನ್ಸ್ಗೆ ಹತ್ತಿಸುವ ಸಂದರ್ಭದಲ್ಲಿ ಈತ ತಪ್ಪಿಸಿಕೊಂಡಿದ್ದಾನೆ. ಬಳಿಕ ಸೋಂಕಿತನು ನಗರದ ಟವರ್ ಕ್ಲಾಕ್ ಬಳಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆದಿದೆ. ಈ ವೇಳೆ ಬಂದರ್ ಪೊಲೀಸರು ಆತನನ್ನು ಮನವೊಲಿಸಿ ವೆನ್ಲಾಕ್ ಕೊವೀಡ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.