ವಿಟ್ಲ: ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ನಡೆದ ಹಿಂದೂ ಜಾಗೃತಿ ಸಭೆಯಲ್ಲಿ ಇಸ್ಲಾಂ ಧರ್ಮದ ಬಗ್ಗೆ ಅವಹೇಳನಕಾರಿ ಭಾಷಣ ಮಾಡಿದ ಆರೋಪದಡಿ ಹಿಂದೂ ಜಾಗರಣ ವೇದಿಕೆಯ ಮುಖಂಡ ರಾಧಾಕೃಷ್ಣ ಅಡ್ಯಂತಾಯ ವಿರುದ್ಧ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ವಿಟ್ಲ ಠಾಣೆಯ ಎಸೈ ಮಂಜುನಾಥ ಅವರಿಗೆ ವಿಟ್ಲದ ಸುನ್ನೀ ಕೋಆರ್ಡಿನೇಶನ್ ಸಮಿತಿ ದೂರು ನೀಡಿದೆ.
ಸೋಮವಾರ ವಿಟ್ಲದಲ್ಲಿ ವಿಶ್ವ ಹಿಂದೂ ಪರಿಷತ್, ಭಜರಂಗದಳ ಮತ್ತು ಹಿಂದೂ ಜಾಗರಣ ವೇದಿಕೆ ವತಿಯಿಂದ ಆಯೋಜಿಸಲಾದ ಹಿಂದೂ ಜನಜಾಗೃತಿ ಸಭೆಯಲ್ಲಿ ರಾಧಾಕೃಷ್ಣ ಅಡ್ಯಂತಾಯ ಅವರು ಇಸ್ಲಾಂ ಎನ್ನುವಂತಹದ್ದು ಧರ್ಮವಲ್ಲ, ಮತವಲ್ಲ, ಸಂಸ್ಕೃತಿ ಅಲ್ಲ, ಸಭ್ಯತೆ ಅಲ್ಲ, ಸಂಸ್ಕಾರ ಅಲ್ಲ, ಮಾನವೀಯತೆ ಅಲ್ಲ ಎಂದಿರುವ ರಾಧಾಕೃಷ್ಣ ಅಡ್ಯಂತಾಯ, ಇಸ್ಲಾಂ ಅನ್ನೊದು ಕ್ರೌರ್ಯ, ಅಮಾನುಷತೆ, ಅತ್ಯಾಚಾರ, ಲೂಟಿಕೋರರ ತಂಡ, ಅದೊಂದು ಕಾಮುಕರ ಗ್ಯಾಂಗ್ ಎಂದು ಅರ್ಥೈಸಬಹುದು ಅಂತಾ ನನಗೆ ಅನ್ನಿಸುತ್ತಿದೆ ಎಂದು ಇಸ್ಲಾಂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ, ಧರ್ಮವನ್ನು ನಿಂದಿಸಿದ್ದರು.