ಬಂಟ್ವಾಳ: ನೇತ್ರಾವತಿ ನದಿಯಿಂದ ಪುತ್ತೂರು ಹಾಗೂ ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಬಂಟ್ವಾಳದ ಬಾಳ್ತಿಲದಲ್ಲಿ ಜಾಕ್ವೆಲ್ ನಿರ್ಮಾಣಕ್ಕೆ ಇದೀಗ ಸ್ಥಳೀಯರಿಂದ ಆಕ್ರೋಶ ಕೇಳಿಬಂದಿದೆ.
ಈಗಾಗಲೇ ಜಾಕ್ವೆಲ್ ನಿರ್ಮಾಣಕ್ಕೆ ಜಲಜೀವನ್ ಮಿಷನ್ ಕಾರ್ಯಕ್ರಮದಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ 789 ಕೋ.ರೂ.ಗಳು ಮಂಜೂರಾಗಿದ್ದು, ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಳಿಕೆ ಮತ್ತು ಇತರ123 ಜನವಸತಿ (ವಿಟ್ಲ ಪಟ್ಟಣ ಪಂಚಾಯತ್ ಸೇರಿ) ಪ್ರದೇಶ, ಪುತ್ತೂರಿನ 319, ಕಡಬ ತಾಲೂಕಿನ 51 ಹಾಗೂ ಸುಳ್ಯ ತಾಲೂಕಿನ 243 ಜನವಸತಿ ಪ್ರದೇಶಗಳಿಗೆ ಕುಡಿಯುವ ನೀರಿನ ಯೋಜನೆಗೆ ಜಾಕ್ವೆಲ್ ನಿರ್ಮಿಸಲಾಗುತ್ತಿದೆ.
ಇನ್ನು ನರಿಕೊಂಬು ಹಾಗೂ ಬಾಳ್ತಿಲ ಗ್ರಾ.ಪಂ.ವ್ಯಾಪ್ತಿಯ ಗಡಿ ಪ್ರದೇಶದಲ್ಲಿ ಕುಂದಾಯಮಜಲುನ ನೇತ್ರಾವತಿ ನದಿ ಕಿನಾರೆಯಲ್ಲಿ ಪ್ರಸ್ತುತ ಜಾಕ್ವೆಲ್ ಕಾಮಗಾರಿ ನಡೆಯುತ್ತಿದ್ದು, ನರಿಕೊಂಬು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇದ್ದರೂ, ಬೇಸಗೆಯಲ್ಲಿ ನರಿಕೊಂಬು ಹಾಗೂ ಬಾಳ್ತಿಲ ಗ್ರಾ.ಪಂ. ವ್ಯಾಪ್ತಿಗೆ ಕುಡಿಯುವ ನೀರು ಸಾಲುತ್ತಿಲ್ಲ. ಹೀಗಾಗಿರುವ ಪುತ್ತೂರು, ಸುಳ್ಯ ಕ್ಷೇತ್ರಗಳಿಗೆ ಹೇಗೆ ನೀರು ಕೊಂಡುಹೋಗುತ್ತಾರೆ ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ.
ಈಗಾಗಲೇ ನರಿಕೊಂಬು ಹಾಗೂ ಬಾಳ್ತಿಲ ಗ್ರಾ.ಪಂ.ಗಳು ಕುಂದಾಯಮಜಲಿನಲ್ಲಿ ಜಾಕ್ವೆಲ್ ನಿರ್ಮಾಣವನ್ನು ವಿರೋಧಿಸಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು, ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಹಾಗೂ ತಹಶೀಲ್ದಾರ್ ಅರ್ಚನಾ ಡಿ.ಭಟ್ ಅವರ ಗಮನಕ್ಕೂ ತಂದಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಸ್ಥಳೀಯವಾಗಿ ಕುಡಿಯುವ ನೀರು ಕೊಟ್ಟು ಬಳಿಕ ಉಳಿದ ಪ್ರದೇಶಗಳಿಗೆ ನೀರು ಕೊಡಲಿ ಎಂಬುದು ಸ್ಥಳೀಯರ ಆಗ್ರಹವಾಗಿದೆ.