ಬೆಂಗಳೂರು: ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಮುಖಂಡರು ಪರಸ್ಪರ ಚಪ್ಪಲಿಗಳಲ್ಲಿ ಕಿತ್ತಾಡಿಕೊಂಡು ಸಭೆ ಮಾಡ್ತಾರೆ. ಆದರೆ ಬಿಜೆಪಿ ಸಭೆ ಮಾತ್ರ ಶಿಸ್ತಿನಿಂದ, ಶಾಂತವಾಗಿ ನಡೆಯುತ್ತದೆ ಎಂದು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬೆಂಗಳೂರಿನ ರಾಜ್ಯ ಬಿಜೆಪಿ ಜಗನ್ನಾಥ ಭವನ ಕಚೇರಿಯಲ್ಲಿ ನಡೆದ ರೈತ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಮೂರು ಪಕ್ಷಗಳಲ್ಲೂ ಮೂರು ವಿಭಿನ್ನತೆ ಇದೆ. ರಾಷ್ಟ್ರೀಯ ಪಾರ್ಟಿಯೊಂದರ ಸಭೆ ಆದಾಗ ಚಪ್ಪಲಿಗಳು ಕೈಯಲ್ಲಿ ಇರುತ್ತದೆ. ಇನ್ನೊಂದು ಕುಟುಂಬದ ಪಕ್ಷ ಇದೆ. ಅಪ್ಪ ಮಕ್ಕಳ ಪಾರ್ಟಿ ಅದು. ಅವರ ಪಾರ್ಟಿಯ ಮೀಟಿಂಗ್ ಆದಾಗ ಒಬ್ಬನ ಚಪ್ಪಲಿ ಇನ್ನೊಬ್ಬನ ದೇಹದೊಳಗೆ ಇರುತ್ತದೆ. ಬಿಜೆಪಿಯಲ್ಲಿ ಮಾತ್ರ ಚಪ್ಪಲಿ ನಮ್ಮಲ್ಲೇ ಇರುತ್ತದೆ. ನಮ್ಮ ಚಪ್ಪಲಿಗಳು ಹೊರಗೆ ಇರುತ್ತವೆ. ಶಾಂತವಾಗಿ ನಮ್ಮ ಸಭೆ ನಡೆಯುತ್ತದೆ. ಒಂದು ಅಪ್ಪ ಮಕ್ಕಳ ಪಕ್ಷ, ಇನ್ನೊಂದು ರಾಷ್ಟ್ರೀಯ ಪಕ್ಷ. ಎರಡೂ ಪಕ್ಷಗಳಲ್ಲಿ ಕಿತ್ತಾಟ. ಅಪ್ಪ ಮಕ್ಕಳ ಪಾರ್ಟಿಯಲ್ಲಿ ಅಣ್ಣ ದೊಡ್ಡವನೋ ತಮ್ಮ ದೊಡ್ಡವನೋ ಎಂದು ಕಿತ್ತಾಟ ಶುರುವಾಗಿದೆ. ರಾಷ್ಟ್ರೀಯ ಪಾರ್ಟಿಯಲ್ಲಿ ಮುಖ್ಯಮಂತ್ರಿ ಯಾರೆಂಬ ಕಿತ್ತಾಟ ಆರಂಭವಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ಕೈ-ತೆನೆ ಪಕ್ಷಗಳ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.