ಮಂಗಳೂರು : “ಕೊರೊನಾ ಎಂದಾಕ್ಷಣ ಯಾರೂ ಕೂಡ ಭಯಪಡುವ ಅಗತ್ಯವಿಲ್ಲ. ಉಸಿರಾಟದ ಸಮಸ್ಯೆ ಇದ್ದರಷ್ಟೇ ಕೊರೊನಾ ಗಂಭೀರ ಸಮಸ್ಯೆಯಾಗುತ್ತದೆ. ಧೈರ್ಯವಾಗಿದ್ದರೆ ಯಾವುದೇ ರೀತಿಯ ಚಿಕಿತ್ಸೆಯೇ ಇಲ್ಲದೇ ಕೋವಿಡ್ ನ್ನು ಸುಲಭವಾಗಿ ಗೆಲ್ಲಬಹುದು” ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಹೇಳಿದ್ದಾರೆ.
ಹಾಗೇ ಕೊರೊನಾದ ತಮ್ಮ ಸ್ವಂತ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ. “ಕೊರೊನಾ ಅನ್ನೋದು ಒಂದು ಸಾಮಾನ್ಯ ಜ್ವರವಷ್ಟೇ. ಒಂದು ವೇಳೆ ಕೊರೊನಾ ಬಂದರೆ ಯಾರನ್ನೂ ಕೂಡ ನೀವು ಅಸ್ಪ್ರಶ್ಯರಂತೆ ಕಾಣಬೇಡಿ.ಕೋವಿಡ್ ಬಂದರೆ ಅವರನ್ನು ನೋಡಿ ನಗಬೇಡಿ. ನಾಳೆ ನಮಗೆ ಬಂದರೆ ಇನ್ನೊಬ್ಬ ನಗುತ್ತಾನೆ ಹಾಗಾಗಿ ನಗಬೇಡಿ” ಎಂದು ಮನವಿ ಮಾಡಿದ್ದಾರೆ. ಹಾಗೇ ಕೊರೊನಾ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬವಂತಹ ಕೆಲಸ ಮಾಡಿದ್ದಾರೆ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ.
“ನನಗೆ ಮೊದಲಿಗೆ ಜ್ವರ, ಶೀತ, ಹಾಗೂ ಗಂಟಲುನೋವು ಕಾಣಿಸಿಕೊಂಡಿತ್ತು. ಆದರೆ ಜ್ವರ ಕಡಿಮೆಯಾಗದೇ ಇದ್ದಾಗ ಪರೀಕ್ಷೆ ಮಾಡಿಸಿದೆ. ಆಗ ಕೊರೊನಾ ಸೋಂಕು ತಗುಲಿರೋದು ಗೊತ್ತಾಯಿತು. ನನಗೆ ಜ್ವರದ ಔಷಧ, ಆ್ಯಂಟಿ ಬಯೋಟಿಕ್, ವಿಟಮಿನ್ ಮಾತ್ರೆಗಳನ್ನು ನೀಡಿದರು. ಎಂಟು ದಿನಗಳ ಬಳಿಕ ಪರೀಕ್ಷಿಸಿದಾಗ ವರದಿ ನೆಗೆಟಿವ್ ಬಂತು. ನಾನು ಈಗ ಡಿಸ್ಚಾರ್ಜ್ ಆಗಿದ್ದೇನೆ. ನನ್ನಲ್ಲಿದ್ದ ಧೈರ್ಯವೇ ನನಗೆ ಶೀಘ್ರ ಗುಣಮುಖವಾಗಲೂ ಅನುಕೂಲ ಮಾಡಿ ಕೊಟ್ಟಿತ್ತು ಎಂದು ಅವರು ಹೇಳಿದ್ದಾರೆ. ಒಂದು ವೇಳೆ ನಿಮಗೆ ಪಾಸಿಟಿವ್ ಬಂದ್ರೆ ಧೈರ್ಯವಾಗಿರಿ, ಹೆದರಬೇಡಿ, ಕೋವಿಡ್ ವಿರುದ್ಧ ಹೋರಾಡೋದಕ್ಕೆ ಧೈರ್ಯವೊಂದೇ ಮದ್ದು” ಎಂದಿದ್ದಾರೆ.