ಬಂಟ್ವಾಳ: ತೆಂಕಬೆಳ್ಳೂರು ಗ್ರಾಮದ ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ರಥಬೀದಿಗೆ 1.75ಕೋ.ರೂ.ವೆಚ್ಚದ ಕಾಂಕ್ರೀಟ್ ಕಾಮಗಾರಿಗೆ ಗುರುವಾರ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಶಿಲಾನ್ಯಾಸ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಧಾರ್ಮಿಕ- ಶೈಕ್ಷಣಿಕ ಸಂಸ್ಥೆಗಳ ಅಭಿವೃದ್ಧಿಯಿಂದ ಊರು ಅಭಿವೃದ್ಧಿಯಾಗುತ್ತದೆ ಎಂಬ ನೆಲೆಯಲ್ಲಿ ಸಂಪರ್ಕ ರಸ್ತೆಗಳನ್ನು ಪ್ರಥಮ ಆದ್ಯತೆಯ ನೆಲೆಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಜನರಿಗೆ ಕಷ್ಟದ ಸಂದರ್ಭದಲ್ಲಿ ನೆರವು ನೀಡುವ ಅವಕಾಶ ಸಿಕ್ಕಿದ್ದು, ಪ್ರಧಾನಿ ನರೇಂದ್ರ ಮೋದಿಯವರ ದಕ್ಷ ಆಡಳಿತದಲ್ಲಿ ಭಾರತೀಯರೆಲ್ಲರೂ ಉಚಿತ ಲಸಿಕೆ ಪಡೆಯುವಂತಾಗಿದೆ. ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಶಕ್ತಿಯನ್ನು ದೇವರು ಕರುಣಿಸುವಂತೆ ಪ್ರಾರ್ಥಿಸುತ್ತೇನೆ ಎಂದರು.
ಗ್ರಾಮದಲ್ಲಿ ಪ್ರಾಕೃತಿಕ ವಿಕೋಪದಿಂದ ಮನೆ ಕುಸಿದು ಹಾನಿಗೊಳಗಾದ 2 ಕುಟುಂಬಗಳಿಗೆ ಶಾಸಕರು ಪರಿಹಾರ ಧನದ ಚೆಕ್ ವಿತರಿಸಿದರು. ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಮಾತನಾಡಿ, ದೇವಸ್ಥಾನದ ರಥ ಸಾಗುವ ಹಾದಿಯ ಅಭಿವೃದ್ಧಿ ಹಲವು ವರ್ಷಗಳ ಬೇಡಿಕೆಯಾಗಿದ್ದು, ಪ್ರಸ್ತುತ ಅದು ಕಾಂಕ್ರೀಟ್ ಕಾಮಗಾರಿಯ ಮೂಲಕ ಈಡೇರುತ್ತಿದೆ. ಕಾವೇಶ್ವರನ ಅನುಗ್ರಹದಿಂದ ಶಾಸಕರ ಕಾಳಜಿಯಿಂದ ಅದು ಈಡೇರುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ 750 ಕೋ.ರೂ.ಗಳ ಅಭಿವೃದ್ಧಿ ಕಾರ್ಯಗಳು ಅನುಷ್ಠಾನಗೊಂಡಿದ್ದು,8.65 ಕೋ.ರೂ.ಗಳ ಅಭಿವೃದ್ಧಿ ಕಾರ್ಯಗಳು ಬಡಗಬೆಳ್ಳೂರು ಗ್ರಾ.ಪಂ.ವ್ಯಾಪ್ತಿಯಲ್ಲೇ ಅನುಷ್ಠಾನಗೊಂಡಿದೆ.
ಬಡಗಬೆಳ್ಳೂರು ಗ್ರಾ.ಪಂ.ಅಧ್ಯಕ್ಷ ಜಿ.ಪ್ರಕಾಶ್ ಆಳ್ವ, ಉಪಾಧ್ಯಕ್ಷೆ ಮಮತಾ, ಸದಸ್ಯರಾದ ವಿಜಯಾ, ಉಮೇಶ್ ಶೆಟ್ಟಿ, ಚೈತ್ರಾ, ಗೀತಾ, ರಘುವೀರ್ ಅಚಾರ್ಯ, ಚಂದ್ರಹಾಸ ಪೂಜಾರಿ, ಬುಡಾ ಅಧ್ಯಕ್ಷ ದೇವದಾಸ್ ಶೆಟ್ಟಿ, ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದಿವಾಕರ ನಾಯಕ್, ವೀಣಾ ಭಟ್, ಜಯರಾಮ್ ಶೆಟ್ಟಿ, ತಾ.ಪಂ.ಮಾಜಿ ಸದಸ್ಯ ಯಶವಂತ ಪೊಳಲಿ, ಬಡಗಬೆಳ್ಳೂರು ಸಿಎ ಬ್ಯಾಂಕ್ ಅಧ್ಯಕ್ಷ ನಂದರಾಮ ರೈ, ಗುತ್ತಿಗೆದಾರರಾದ ಸುಧಾಕರ ಶೆಟ್ಟಿ ಮುಗ್ರೋಡಿ, ಅನಿಲ್ ಶೆಟ್ಟಿ, ಕಾರ್ಯಪಾಲಕ ಎಂಜಿನಿಯರ್ ಪ್ರಭಾಕರ್ ಟಿ.ಎಂ, ಕಿರಿಯ ಎಂಜಿನಿಯರ್ ಪ್ರಸನ್ನ ರಾವ್, ದಾಮೋದರ್, ಪ್ರಮುಖರಾದ ಮಹಾಬಲ ಆಳ್ವ ಕಮ್ಮಾಜೆ, ತಿರುಲೇಶ್ ಬೆಳ್ಳೂರು, ಅಶ್ವಥ್ ರಾವ್, ರಮೇಶ್ ಪೂಜಾರಿ ಬಟ್ಟಾಜೆ, ಶಶಿಕಿರಣ್, ಕಿಶೋರ್ ಪಲ್ಲಿಪಾಡಿ, ಯಶನಂತ ನಾಯ್ಕ್ ನಗ್ರಿ ಮೊದಲಾದವರಿದ್ದರು.ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಘು ಎಲ್.ಶೆಟ್ಟಿ ಸ್ವಾಗತಿಸಿದರು. ಸಮಿತಿ ಸದಸ್ಯ ದಿವಾಕರ್ ನಾಯ್ಕ್ ವಂದಿಸಿದರು. ಪ್ರಕಾಶ್ ಬೆಳ್ಳೂರು ಕಾರ್ಯಕ್ರಮ ನಿರ್ವಹಿಸಿದರು.