ಬೆಂಗಳೂರು: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ಅವರಿಗೆ ಕರೊನಾವೈರಸ್ ಸೋಂಕು ದೃಢಪಟ್ಟಿದೆ. ಜ್ವರ ಹಾಗೂ ಮೈಕೈ ನೋವಿನಿಂದ ಬಳಲುತ್ತಿದ್ದ ಅವರು ಮೈಸೂರಿನ ಜಯಲಕ್ಷ್ಮಿಪುರಂನ ತಮ್ಮ ನಿವಾಸದಲ್ಲಿ ನಿವಾಸದಲ್ಲಿಯೇ ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದರು.
ಶ್ರೀನಿವಾಸ್ ಪ್ರಸಾದ್ ಅವರಿಗೆ ಮಾಡಲಾಗಿದ್ದ ಸ್ವ್ಯಾಬ್ ಪರೀಕ್ಷೆಯಲ್ಲಿ ಕರೊನಾವೈರಸ್ ಸೋಂಕು ಪಾಸಿಟಿವ್ ಎಂದು ಬಂದಿದೆ. ಜೊತೆಗೆ ಅವರ ರಕ್ತ ಮಾದರಿ ಪರೀಕ್ಷೆಯನ್ನೂ ವೈದ್ಯರು ಮಾಡಿದ್ದರು. ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುವ ಸಾಧ್ಯತೆಯಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಒಳಗಾಗಲಿದ್ದಾರೆ ಎನ್ನಲಾಗಿದೆ.
ಸೋಮವಾರವಷ್ಟೇ ವಿಜಯೇಂದ್ರ, ಹಾಸನ ಶಾಸಕ ಪ್ರೀತಂಗೌಡ, ಎಂಎಲ್ ಸಿ ವಿಶ್ವನಾಥ್, ಮಾಜಿ ಸಚಿವ ವಿಜಯಶಂಕರ್ ಸೇರಿದಂತೆ ಹಲವರು ಸಂಸದರನ್ನು ಭೇಟಿಯಾಗಿದ್ದರು. ಈಗ ಅವರೆಲ್ಲರಿಗೂ ಕೋವಿಡ್ ಭೀತಿ ಎದುರಾಗಿದೆ.