ಬೆಂಗಳೂರು: ಬಿಗ್ಬಾಸ್ ಸೀಸನ್ 7ರಲ್ಲಿ ಸ್ವರ್ಧಾಳುವಾಗಿದ್ದ ನಟಿ ಚೈತ್ರಾ ಕೊಟ್ಟೂರು ಸದ್ದಿಲ್ಲದೆಯೇ ನಾಗಾರ್ಜುನ್ ಎಂಬವರ ಜೊತೆ ನಿನ್ನೆ ಬ್ಯಾಟರಾಯನಪುರದಲ್ಲಿರುವ ಗಣೇಶ ದೇವಸ್ಥಾನದಲ್ಲಿ ಸರಳ ವಿವಾಹ ಮಾಡಿಕೊಂಡು ಎಲ್ಲರಿಗೂ ಶಾಕ್ ನೀಡಿದ್ದರು.
ಕರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಆಡಂಭರವಿಲ್ಲದೆ ಕನ್ಸ್ಟ್ರಕ್ಷನ್ ರಿಯಲ್ ಎಸ್ಟೇಟ್ ವೃತ್ತಿಯ ನಾಗಾರ್ಜುನ್ ಎಂಬವರನ್ನು ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಆದರೆ ಮದುವೆಯಾಗಿ ಮೊದಲ ರಾತ್ರಿಗೆ ತಯಾರಾಗಬೇಕಿದ್ದ ಜೋಡಿ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಚೈತ್ರಾ ಕೈ ಹಿಡಿದಿರುವ ಹುಡುಗ ನಾಗಾರ್ಜುನ್ ಅವರು ಮಂಡ್ಯ ಮೂಲದವರು. ಕಳೆದ ಒಂದು ವರ್ಷದಿಂದ, ಅಂದರೆ ಚೈತ್ರಾ ಬಿಗ್ ಬಾಸ್ ಕನ್ನಡ ಸೀಸನ್ 7ರಲ್ಲಿ ಸ್ಪರ್ಧಿಸಿ ಹೊರಬಂದ ಬಳಿಕ ನಾಗಾರ್ಜುನ್ ಪರಿಚಯ ಆಯಿತು. ನಂತರ ಅವರ ನಡುವೆ ಪ್ರೀತಿ ಚಿಗುರಿತ್ತು. ಈಗ ಆ ಪ್ರೀತಿಗೆ ಮದುವೆಯ ಮುದ್ರೆ ಬಿದ್ದಿತ್ತು. ಆದರೆ, ಈ ಮದುವೆ ನಾಗಾರ್ಜುನ್ ಕುಟುಂಬಸ್ಥರಿಗೆ ಇಷ್ಟವಿಲ್ಲವಾಗಿತ್ತಂತೆ. ಆದರೆ ಕೆಲವೊಂದು ಸಂಘಟನೆಗಳವರು ಸೇರಿ ನಾಗಾರ್ಜುನ್ ಅವರನ್ನು ದೇವಸ್ಥಾನದಲ್ಲಿ ಕೂಡಿ ಹಾಕಿ ಬಲವಂತದಲ್ಲಿ ಮದುವೆ ಮಾಡಿಸಿದ್ದಾರೆ ಎನ್ನಲಾಗಿದೆ. ಸಂಘಟನೆಗಳ ಬೆದರಿಕೆಗೆ ಮಣಿದ ನಾಗಾರ್ಜುನ್ ಒಲ್ಲದ ಮನಸ್ಸಿನಿಂದ ತಾಳಿ ಕಟ್ಟಿದ್ದಾರೆ ಎನ್ನಲಾಗಿದೆ.
ಹೀಗಾಗಿ, ಕೋಲಾರದ ಕುರುಬರಪೇಟೆಯ ಚೈತ್ರಾ ಮನೆಗೆ ಬಂದ ಮೇಲೆ ನಾಗಾರ್ಜುನ್ ಈ ಬಗ್ಗೆ ತಗಾದೆ ತಗೆದಿದ್ದಾರೆ. ನಾಗಾರ್ಜುನ್ ಕುಟುಂಬದವರು ಕೋಲಾರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹೀಗಾಗಿ ಪೊಲೀಸರು ಚೈತ್ರಾ-ನಾಗಾರ್ಜುನ್ ದಂಪತಿಯನ್ನು ಠಾಣೆಗೆ ಕರೆಸಿದ್ದಾರೆ. ಅಲ್ಲಿ ನಾಗಾರ್ಜುನ್ ಈ ಮದುವೆ ಇಷ್ಟವಿಲ್ಲ, ನಾನು ಚೈತ್ರಾ ಜತೆ ಬಾಳುವುದಿಲ್ಲ ಎಂದು ಹೇಳುತ್ತಿದ್ದರೆ, ನನಗೆ ನಾಗಾರ್ಜುನ್ ಇಷ್ಟ, ನಾನು ಅವನ ಜತೆಗೇ ಇರುತ್ತೇನೆ ಎಂದು ಚೈತ್ರಾ ಪಟ್ಟು ಹಿಡಿದಿದ್ದಾರೆ. ಬುಧವಾರದವರೆಗೆ ಈ ಜೋಡಿಗೆ ಪೊಲೀಸರು ಸಮಯ ನೀಡಿದ್ದಾರೆ ಎನ್ನಲಾಗಿದೆ.