ಬೆಳ್ತಂಗಡಿ; ಅಡಿಕೆ ಅಂಗಡಿ ಕ್ಯಾಷ್ ಡ್ರಾಯರ್ ನಿಂದ ಹಣ ಕಳ್ಳತನ ಮಾಡಿರುವ ಘಟನೆ ಬೆಳ್ತಂಗಡಿ ಮಾಲಾಡಿ ಗ್ರಾಮದ ಮಡಂತ್ಯಾರು ನಾವುಂಡ ಕಡೆಗೆ ಹೋಗುವ ರಸ್ತೆಯ ಬದಿಯಲ್ಲಿರುವ ಅಗ್ಲಿಲಾ ಟ್ರೇಡರ್ಸ್ ನಲ್ಲಿ ನಡೆದಿದೆ.
ಆ ಬಗ್ಗೆ ಸಿ ಟಿ ಪುಷ್ಪರಾಜ ಹೆಗ್ಡೆ ಎಂಬವರು ದೂರು ನೀಡಿದ್ದಾರೆ. ಪುಷ್ಪರಾಜ್ ಅವರು ಬೆಳ್ತಂಗಡಿ ಮಾಲಾಡಿ ಗ್ರಾಮದ ಮಡಂತ್ಯಾರು ನಾವುಂಡ ಕಡೆಗೆ ಹೋಗುವ ರಸ್ತೆಯ ಬದಿಯಲ್ಲಿರುವ ಪಾಸ್ಕಲ್ ಪಾಯಸ್ ರವರ ಕಟ್ಟಡದಲ್ಲಿ ಅಗ್ಲಿಲಾ ಟ್ರೇಡರ್ಸ್ ಎಂಬ ಹೆಸರಿನ ಅಡಿಕೆ ಅಂಗಡಿಯನ್ನು ನಡೆಸುತ್ತಿದ್ದಾರೆ. ದಿನಾಂಕ: 01.01.2023 ರಂದು ಬೆಳಿಗ್ಗೆ ಅಂಗಡಿಯಲ್ಲಿ ಕೆಲಸ ಮಾಡುವ ಇಸ್ಮಾಯಿಲ್ ಎಂಬವರಲ್ಲಿ ಕ್ಯಾಷ್ ಡ್ರಾಯರ್ ನ ಕೀಯನ್ನು ನೀಡಿ, ಅನ್ಯ ಕೆಲಸದ ನಿಮಿತ್ತ ಹೊರಗೆ ಹೋಗಿರುತ್ತಾರೆ. ಮಧ್ಯಾಹ್ನ ವೇಳೆಗೆ ಅಂಗಡಿಯಲ್ಲಿ ಕೆಲಸ ಮಾಡುವ ಇಸ್ಮಾಯಿಲ್ ಕರೆ ಮಾಡಿ, ಯಾರೋ ಇಬ್ಬರು ಅಪರಿಚಿತರು ಸ್ಕೂಟರಿನಲ್ಲಿ ಅಂಗಡಿಗೆ ಬಂದಿದ್ದು, ಅಂಗಡಿಯಲ್ಲಿದ್ದವರ ಗಮನ ಬೇರೆಡೆಗೆ ಸೆಳೆದು ಕ್ಯಾಷ್ ಡ್ರಾಯರ್ ನಲ್ಲಿದ್ದ ಹಣವನ್ನು ಕಳ್ಳತನ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪುಷ್ಪರಾಜ್ ಅಂಗಡಿಗೆ ಬಂದು ಕ್ಯಾಶ್ ಡ್ರಾಯರ್ ನ್ನು ಪರಿಶೀಲಿಸಿದಾಗ ಕ್ಯಾಶ್ ಡ್ರಾವರ್ ನಲ್ಲಿದ್ದ ಒಟ್ಟು 2,31,000/- ರೂ ಹಣ ಕಳವಾಗಿರುವುದು ಗೊತ್ತಾಗಿದೆ. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಅದರಂತೆ ಅ.ಕ್ರ 01/2024 ಕಲಂ: 380 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.