Friday, May 10, 2024
Homeಕರಾವಳಿಬೆಳ್ತಂಗಡಿ : ದೇಶದ ಮೂರು ತಂಡಗಳಲ್ಲಿ ಸ್ಥಾನ ಪಡೆದ ಶಿಲ್ಪಿ ಜಯಚಂದ್ರ:ಬೆಳ್ತಂಗಡಿಯ ಶಿಲ್ಪಿಯಿಂದ ಅರಳಿದ ಅಯೋಧ್ಯೆ...

ಬೆಳ್ತಂಗಡಿ : ದೇಶದ ಮೂರು ತಂಡಗಳಲ್ಲಿ ಸ್ಥಾನ ಪಡೆದ ಶಿಲ್ಪಿ ಜಯಚಂದ್ರ:ಬೆಳ್ತಂಗಡಿಯ ಶಿಲ್ಪಿಯಿಂದ ಅರಳಿದ ಅಯೋಧ್ಯೆ ರಾಮಲಲ್ಲಾ

spot_img
- Advertisement -
- Advertisement -

ಬೆಳ್ತಂಗಡಿ : ದೇಶ ವಿದೇಶವೇ ಕೌತುಕದಿಂದ ಕಾಯುತ್ತಿರುವ ಶ್ರೀ ರಾಮ ಜನ್ಮಭೂಮಿ ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಬಾಲರಾಮನ ಸುಂದರ ವಿಗ್ರಹ ಮೂಡಿಬರುವಲ್ಲಿ, ದೇಶದ ಮೂರು ತಂಡಗಳ ಪೈಕಿ ಬೆಳ್ತಂಗಡಿ ತಾಲೂಕಿನ ನ್ಯಾಯತರ್ಪು ಗ್ರಾಮದ ನಾಳದಲ್ಲಿರುವ ಶಿಲ್ಪಿ ಜಯಚಂದ್ರ ಆಚಾರ್ಯ ಅವರು ಪಾಲು ಪಡೆದಿದ್ದಾರೆ.

ಪವಿತ್ರ ರಾಮಜನ್ಮಭೂಮಿಯಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಬಾಲರಾಮನ ವಿಗ್ರಹ ಕೆತ್ತನೆಗೆಂದು ದೆಹಲಿಯಲ್ಲಿ ಕಳೆದ ೭ ತಿಂಗಳ ಹಿಂದೆ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ದೇಶದ ನೂರಕ್ಕೂ ಹೆಚ್ಚು ಕಲಾವಿದರ ತಂಡದೊಂದಿಗೆ ಸಂದರ್ಶನ ನಡೆಸಿತ್ತು. ಆ ಪೈಕಿ ರಾಜಸ್ಥಾನದ ಸತ್ಯನಾರಾಯಣ ಪಾಂಡೆ, ಮೈಸೂರಿನ ಅರುಣ್ ಯೋಗಿರಾಜ್, ಸಾಗರದ ವಿಪಿನ್ ಬದೋರಿಯಾ ಹಾಗೂ ಜಿ.ಎಲ್.ಭಟ್ ಇಡಗುಂಜಿ ಸೇರಿ ಮೂರು ತಂಡ ಆಯ್ಕೆಯಾಗಿತ್ತು.

ಸಾಗರದ ವಿಪಿನ್ ಬದೋರಿಯಾ ಅವರ ತಂಡದಲ್ಲಿ ಹಾನಗಲ್‌ನ ಮೌನೇಶ್ ಬಡಿಗೇರ್, ಕಲ್ಗಟಿಗೆ ಪ್ರಕಾಶ್ ಹರಮನ್ ನವರ್, ಇಡಗುಂಜಿ ಸಂದೀಪ್ ಸೇರಿದಂತೆ ಬೆಳ್ತಂಗಡಿ ತಾಲೂಕಿನ ನಾಳದ ಜಯಚಂದ್ರ ಆಚಾರ್ಯ ವಿಗ್ರಹ ನಿರ್ಮಾಣ ತಂಡದಲ್ಲಿ ಆಯ್ಕೆಯಾಗಿದ್ದರು.

8 ಅಡಿಯುಳ್ಳ ಪುಟ್ಟ ಬಾಲರಾಮನ ವಿಗ್ರಹ

ಬಾಲರಾಮನ ವಿಗ್ರಹ ಕೆತ್ತನೆಗೆಂದು ರಾಜ್ಯದ ಕಾರ್ಕಳದ ಈದುವಿನ ಕೃಷ್ಣಶಿಲೆ, ರಾಜಸ್ಥಾನದ ಅಮೃತಶಿಲೆ, ಮೈಸೂರಿನ ಎಚ್.ಡಿ.ಕೋಟೆಯ ಕೃಷ್ಣ ಶಿಲೆ, ಗಂಡಕಿ ನದಿಯ ಸಾಲಿಗ್ರಾಮದ ಶಿಲೆ ಆಯ್ಕೆಗೊಂಡು ಅಯೋಧ್ಯೆಗೆ ಕಳುಹಿಸಲಾಗಿತ್ತು. ಆ ಪೈಕಿ ಮೈಸೂರಿನ ಮತ್ತು ರಾಜಸ್ಥಾನದ ಶಿಲೆಗಳೆರಡು ರಾಮಲಲ್ಲಾನ ಮೂರ್ತಿ ನಿರ್ಮಾಣಕ್ಕೆ ಶ್ರೇಷ್ಠವಾಗಿತ್ತು. ಐದು ವರ್ಷದ ಮಗುವಿನ ರೂಪವುಳ್ಳ ಬಾಲರಾಮನ ನಿಂತ 8 ಅಡಿ ಎತ್ತರದ ಭಂಗಿಯ ವಿಗ್ರಹ ನಿರ್ಮಾಣಕ್ಕೆ ಮೂರು ತಂಡಗಳಿಗೆ ಟ್ರಸ್ಟ್ ಸೂಚಿಸಿತ್ತು.

ಗೌಪ್ಯ ಮತ್ತು ಸಕಲ ಬಂದೋಬಸ್ತ್

ಅಯೋಧ್ಯೆಯಿಂದ 3 ಕಿ.ಮೀ. ದೂರದಲ್ಲಿ ಮೂರು ತಂಡವನ್ನು ಪ್ರತ್ಯೇಕಿಸಿ ಸಕಲ ಬಂದೋಬಸ್ತ್ ನೊಂದಿಗೆ ಗೌಪ್ಯ ಸ್ಥಳದಲ್ಲಿ ವಿಗ್ರಹ ರಚನೆ ಪೂರ್ಣಗೊಂಡಿದೆ. ಈ ಪೈಕಿ ಕನ್ನಡಿಗ ಮೈಸೂರಿನ ಅರುಣ್ ಯೋಗಿರಾಜ್ ಅವರ ತಂಡ ರಚಿಸಿದ ಕೃಷ್ಣಶಿಲೆ ರೂಪಿತ ಬಾಲರಾಮನ ವಿಗ್ರಹವು ಜನವರಿ 22 ರಂದು ಮೂಲ ವಿಗ್ರಹವಾಗಿ ಪ್ರಾಣಪ್ರತಿಷ್ಠೆಗೆ ಆಯ್ಕೆಯಾಗಿದೆ ಎಂಬುದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಇನ್ನೇನು ರಾಮಜನ್ಮಭೂಮಿ ಟ್ರಸ್ಟ್ ಅಧಿಕೃತ ಘೋಷಣೆಗೆ ದೇಶದ ಜನ ಕಾತುರಾಗಿದ್ದಾರೆ.

ಜಯಚಂದ್ರ ಆಚಾರ್ಯ ಅವರು ಹಾಗೂ ರಾಜಸ್ಥಾನದ ತಂಡ ರಚಿಸಿರುವ ಅಮೃತ ಶಿಲೆ ಹಾಗೂ ಕೃಷ್ಣಶಿಲೆ ವಿಗ್ರಹಗಳು ಟ್ರಸ್ಟ್ ಸೂಚನೆಯಂತೆ ಉನ್ನತ ಸ್ಥಾನಮಾನದೊಂದಿಗೆ ಅಯೋಧ್ಯೆ ಮಂದಿರದೊಳಗೆ ಸಾರ್ವಜನಿಕರ ದರ್ಶನಕ್ಕೆ ಲಭ್ಯವಾಗಲಿದೆ. ವಿಗ್ರಹ ರಚನೆಗೆ ಸಮ್ಮತಿ ಸಿಗದ ಶಿಲೆಗಳು ಗಣಪತಿ ಮಂದಿರದ ಬಳಿ ಇರಿಸಲಾಗಿದೆಯಂತೆ. ಅವುಗಳು ಮುಂದೆ ಬೇರೆ ವಿಗ್ರಹ ಅಥವಾ ಬೇರೆ ರೂಪದಲ್ಲಿ ಸ್ಥಾನ ಪಡೆಯುವ ಅವಕಾಶಕ್ಕಾಗಿ ಕಾಯ್ದಿರಿಸಲಾಗಿದೆಯಂತೆ.

ನಾಳದ ಪ್ರತಿಭೆ ಜಯಚಂದ್ರ ಆಚಾರ್ಯ ನಾಳದ ಗ್ರಾಮೀಣ ಯುವ ಪ್ರತಿಭೆಯಾಗಿರುವ ಜಯಚಂದ್ರ ಆಚಾರ್ಯ (33) ಅವರು ತಮ್ಮ ಕಲಾ ನೈಪುಣ್ಯತೆಯಿಂದ ಈಗಾಗಲೇ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ, ವಿಶ್ವಕರ್ಮ ಶಿಲ್ಪರತ್ನ, ರಾಜ್ಯ ಯುವಜನ ಪರಿಷತ್ ನಿಂದ ವಿಶ್ವಕರ್ಮ ಅನರ್ಘ್ಯ ಸೇವಾ ರತ್ನ ಪ್ರಶಸ್ತಿ ಪುರಸ್ಕೃತರು. ಪಿಯುಸಿ ಬಳಿಕ ಶಿಲ್ಪಕಲೆ ಅಧ್ಯಯನ ಮಾಡಿರುವ ಇವರು ತಮಿಳುನಾಡು ರಾಘವೇಂದ್ರ ಸ್ವಾಮಿ ದೇವಸ್ಥಾನಕ್ಕೆ ಮರದ ಚಂದ್ರಮಂಡಲ ರಥ, ಉಡುಪಿಯ ಗಣಪತಿ ದೇವಸ್ಥಾನಕ್ಕೆ ಪುಷ್ಪರಥ ರಚನೆ, ಸರಪಾಡಿ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಪಲ್ಲಕ್ಕಿ, ಮಧ್ಯಪ್ರದೇಶಕ್ಕೆ ರಾಮನ ಪಾದುಕೆ ಸೇರಿದಂತೆ ಹೊಯ್ಸಳ ಶೈಲಿ, ಚೋಳ ಶೈಲಿ, ಚಾಲುಕ್ಯ ಶೈಲಿ ಸೇರಿಮೊದಲಾದ ಪಾರಂಪರಿಕ ಶೈಲಿಯ ವಿಗ್ರಹಗಳ ರಚನೆ ಮಾಡಿರುವುದು ಅವರ ಹೆಗ್ಗಳಿಕೆ.

- Advertisement -
spot_img

Latest News

error: Content is protected !!