ಮಂಗಳೂರು: ತನ್ನ ಕಚೇರಿಗೆ ತರಬೇತಿಗೆಂದು ಬರುತ್ತಿದ್ದ ಕಾನೂನು ಪದವಿ ವಿದ್ಯಾರ್ಥಿನಿಯೊಬ್ಬರಿಗೆ ಮಂಗಳೂರಿನ ಪ್ರತಿಷ್ಠಿತ ವಕೀಲ ಕೆ.ಎಸ್.ಎನ್. ರಾಜೇಶ್ ಭಟ್ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತೆಯ ಸ್ನೇಹಿತೆಗೆ ಬೆದರಿಕೆ ಹಾಕಿದ ಆರೋಪದಡಿ ಪವಿತ್ರಾ ಆಚಾರ್ಯ ಎಂಬುವರನ್ನ ಪೊಲೀಸರು ಬಂಧಿಸಿದ್ದಾರೆ.
ಸಂತ್ರಸ್ತೆಯರಿಗೆ ನ್ಯಾಯ ಕೊಡಿಸುತ್ತೇನೆಂದು ಉರ್ವ ಪೊಲೀಸ್ ಠಾಣೆಗೆ ಕರಿಸಿ ಠಾಣೆಯಲ್ಲಿ ಸಂತ್ರಸ್ತೆ ಜೊತೆ ಸಂಧಾನ ವೇಳೆ ಪವಿತ್ರಾ ಆಚಾರ್ಯ ಬೆದರಿಸಿ ಸಂತ್ರಸ್ತೆಯರಿಂದ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ ಎಂಬ ಆರೋಪ ಪವಿತ್ರಾ ಆಚಾರ್ಯ ವಿರುದ್ಧ ಕೇಳಿ ಬಂದಿದೆ. ಹೀಗಾಗಿ ಅವರನ್ನು ಬಂಧಿಸಿದ್ದು ಪ್ರಕರಣ ಸಂಬಂಧ ಸಂತ್ರಸ್ತೆಯ ಬಾಯ್ ಫ್ರೆಂಡ್ ಧ್ರುವ ಮತ್ತು ಆತನ ತಾಯಿ ಮಹಾಲಕ್ಷ್ಮೀ ಕೂಡ ಅರೆಸ್ಟ್ ಆಗಿದ್ದಾರೆ.
ಇನ್ನು ಕರ್ತವ್ಯ ಲೋಪದಡಿ ಉರ್ವ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಕಲಾ ಮತ್ತು ಹೆಡ್ ಕಾನ್ಸ್ಟೇಬಲ್ ಪ್ರಮೋದ್ ಅಮಾನತುಗೊಳಿಸಿ ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ. ಕಾನೂನು ಬಾಹಿರವಾಗಿ ಸಂತ್ರಸ್ತೆಯಿಂದ ಮುಚ್ಚಳಿಕೆ ಬರೆಸಿಕೊಂಡು ಹೆಬ್ಬೆಟ್ಟು ಸಹಿ ಹಾಕಿಸಿಕೊಳ್ಳಲಾಗಿದೆ ಹೀಗಾಗಿ ಕರ್ತವ್ಯ ಲೋಪವಾಗಿದೆ ಎಂದು ಪಿಎಸ್ಐ, ಹೆಡ್ ಕಾನ್ಸ್ಟೇಬಲ್ ಸಸ್ಪೆಂಡ್ ಮಾಡಲಾಗಿದೆ.
ಲೋಕಾಯುಕ್ತ ಮತ್ತು ಎಸಿಬಿ ವಿಶೇಷ ವಕೀಲರಾದ ಕೆ.ಎಸ್.ಎನ್. ರಾಜೇಶ್ ಭಟ್ ವಿರುದ್ಧ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಉತ್ತರ ಪ್ರದೇಶ ಮೂಲದ ವಿದ್ಯಾರ್ಥಿನಿ ಇತ್ತೀಚಿಗೆ ದೂರು ದಾಖಲಿಸಿದ್ದರು. ರಾಜೇಶ್ರ ಕಚೇರಿಯಲ್ಲಿ ಇಂಟರ್ನ್ಶಿಪ್ ಮಾಡಲು ಬಂದಿದ್ದ ವಿದ್ಯಾರ್ಥಿನಿಗೆ ಕಚೇರಿಯಲ್ಲೇ ಲೈಂಗಿಕ ಕಿರುಕುಳ ನೀಡಿದ್ದರು. ಖಾಸಗಿ ಅಂಗಗಳನ್ನು ಮುಟ್ಟಿ ಅಸಭ್ಯವಾಗಿದ ವರ್ತಿಸಿದರು ಎಂದು ರಾಜೇಶ್ ವಿರುದ್ಧ ಸಂತ್ರಸ್ತೆ ದೂರು ನೀಡಿದ್ದರು.