ವಿಟ್ಲ: ಕಡಬ ತಾಲೂಕಿನ ಕಾಣಿಯೂರು ಸಮೀಪದ ಬೈತಡ್ಕ ಎಂಬಲ್ಲಿ ಕಾರು ಹೊಳೆಗೆ ಬಿದ್ದು ಇಬ್ಬರು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ನಾಪತ್ತೆ ಪ್ರಕರಣ ದಾಖಲಾಗಿದೆ.
ವಿಟ್ಲ ಮುಡ್ನೂರು ಗ್ರಾಮದ ಶಾಂತಿಯಡ್ಕ ನಿವಾಸಿ ಧನುಷ್ (25) ನಾಪತ್ತೆಯಾಗಿರುವ ಬಗ್ಗೆ ಧನುಷ್ ಅವರ ತಂದೆ ಚೋಮ ನಾಯ್ಕ ವಿಟ್ಲ ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ ಬೆನ್ನಲ್ಲೇ ಕನ್ಯಾನ ಕೋನಾಲೆ ನಿವಾಸಿ ಧನಂಜಯ (26) ನಾಪತ್ತೆಯಾದ ಬಗ್ಗೆ ಅವರ ಸಹೋದರ ದೂರು ನೀಡಿದ್ದಾರೆ.
ಧನುಷ್ ಮತ್ತು ಧನಂಜಯ ಜು.9ರಂದು ರಾತ್ರಿ 8 ಗಂಟೆಗೆ ಬಂಟ್ವಾಳ ತಾಲೂಕು ವಿಟ್ಲಮುಡ್ನೂರು ಗ್ರಾಮದ ಶಾಂತಿಯಡ್ಕ ಮನೆಯಿಂದ ತನ್ನ ಮಾರುತಿ ಕಾರಿನಲ್ಲಿ ವಿಟ್ಲ ಕಡಂಬು ಕಡೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದು ಈವರೆಗೆ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.
ಇಬ್ಬರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು ಸಂಬಂಧಿಕರಲ್ಲಿ, ಸ್ನೇಹಿತರಲ್ಲಿ ವಿಚಾರಿಸಿದಾಗ ಅವರ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ. ನಾಪತ್ತೆಯಾದ ಅವರನ್ನು ಪತ್ತೆ ಮಾಡಿ ಕೊಡುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.