ಮಂಗಳೂರು: ಪ್ಲಾಸ್ಟಿಕ್ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸೈಕಲ್ನಲ್ಲೇ ದೇಶ ಸುತ್ತಲು ಹೊರಟು ಈಗಾಗಲೇ 8 ರಾಜ್ಯಗಳನ್ನು ದಾಟಿರುವ ಮಧ್ಯಪ್ರದೇಶ ಮೊರೆನಾದ ಸೈಕ್ಲಿಸ್ಟ್ ಬೃಜೇಶ್ ಶರ್ಮಾ ರವಿವಾರ ಮಂಗಳೂರು ನಗರ ತಲುಪಿದ್ದಾರೆ.
ಮಳೆ ಹಿನ್ನೆಲೆ, ವಿಶ್ರಾಂತಿ ಹಾಗೂ ಸ್ಥಳೀಯರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ನಗರದಲ್ಲಿ ಉಳಿದುಕೊಂಡಿರುವ ಬೃಜೇಶ್ ಅವರು ಈಗಾಗಲೇ ಸುಮಾರು 36,000 ಕಿ.ಮೀ ಕ್ರಮಿಸಿದ್ದು ಇನ್ನು ಲಕ್ಷಾಂತರ ಕಿ.ಮೀ ಪ್ರಯಾಣ ಬಾಕಿ ಇದ್ದು ಸೈಕಲ್ನಲ್ಲಿಯೇ ದೇಶ ಸುತ್ತಲಿದ್ದಾರೆ. ಎಲ್ಲ ರಾಜ್ಯಗಳ ನಗರ, ಹಳ್ಳಿಗಳನ್ನು ತಲುಪಿ ಪ್ಲಾಸ್ಟಿಕ್ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಿ ಪ್ಲಾಸ್ಟಿಕ್ ಮುಕ್ತ ಭಾರತಕ್ಕಾಗಿ ಕೈಜೋಡಿಸುವಂತೆ ಮಾಡುವುದು ಇವರ ಪ್ರಯತ್ನ.
ಬಿಎಸ್ಎಫ್ ತರಬೇತಿಯಲ್ಲಿದ್ದೆ. ಬಳಿಕ ಗಾಯದ ಹಿನ್ನೆಲೆಯಲ್ಲಿ ಸೇವೆ ಮೊಟಕುಗೊಳಿಸಿ ಕಂಪೆನಿಯೊಂದರಲ್ಲಿ ಉದ್ಯೋಗ ಮಾಡಿದೆ. ಪ್ಲಾಸ್ಟಿಕ್ ನಿಂದಾಗಿ ಪಕ್ಷಿಯೊಂದು ಬದುಕು ಕಳೆದುಕೊಂಡ ದೃಶ್ಯವನ್ನು ಚಾನೆಲ್ನಲ್ಲಿ ವೀಕ್ಷಿಸಿದ ಅನಂತರ ಪ್ಲಾಸ್ಟಿಕ್ ಕುರಿತು ರಾಷ್ಟ್ರವ್ಯಾಪಿ ಜಾಗೃತಿ ಮೂಡಿಸಲು ನಿರ್ಧರಿಸಿದೆ. ಅದಕ್ಕಾಗಿ ಸೈಕಲ್ ಆಯ್ಕೆ ಮಾಡಿದೆ’ ಎನ್ನುತ್ತಾರೆ ಬೃಜೇಶ್,
ಬೃಜೇಶ್ ಅವರು 2019ರ ಸೆಪ್ಟೆಂಬರ್ 17ರಂದು ಗುಜರಾತ್ ನಿಂದ ಪಯಣ ಆರಂಭಿಸಿ ಈಗಾಗಲೇ ರಾಜಸ್ಥಾನ, ಹರಿಯಾಣ, ಹೊಸದಿಲ್ಲಿ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಮಹಾರಾಷ್ಟ್ರ, ಗೋವಾ ರಾಜ್ಯಗಳನ್ನು ಸುತ್ತಿ ವಿದ್ಯಾರ್ಥಿ, ಸಾರ್ವಜನಿಕರು, ರೈತರಲ್ಲಿ ಜಾಗೃತಿ ಮೂಡಿಸಿದ್ದಾರೆ. ಮಂಗಳೂರಿನಿಂದ ಬಿ.ಸಿ.ರೋಡ್, ಮೂಡುಬಿದಿರೆ, ಆಗುಂಬೆ, ಶಿವಮೊಗ್ಗ, ಬೆಳಗಾವಿ, ಚಿಕ್ಕಮಗಳೂರು, ಕೊಡಗು ಮೊದಲಾದೆಡೆದೆ ತೆರಳಿ ಕೇರಳಕ್ಕೆ ಪ್ರಯಾಣ ಬೆಳೆಸಲಿದ್ದಾರೆ.