ನೆಲ್ಯಾಡಿ :ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು ಮಂಗಳೂರು ಚತುಷ್ಪಥ ರಸ್ತೆಯ ಕಾಮಗಾರಿ ನಡೆಯುತ್ತಿದ್ದು, ಇದೇ ರಸ್ತೆಯ ಶಿರಾಡಿ ಸಮೀಪದ ಎಂಜಿರದ ಪರಕ್ಕಳ ಎಂಬಲ್ಲಿ ನಿರ್ಮಾಣ ಹಂತದ ಸೇತುವೆಯು ಬುಧವಾರ ರಾತ್ರಿ ಕುಸಿದು ಬಿದ್ದಿದೆ. ಸೇತುವೆ ಕುಸಿತದ ಬೆನ್ನಲ್ಲಿಯೇ ಕಳಪೆ ಗುಣಮಟ್ಟದ ಕಾಮಗಾರಿಯೇ ಕುಸಿತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಕಳೆದ ಎರಡು ವರ್ಷಗಳಿಂದ ಎಸ್ ಎಂ ಔತುಡೆ ಕನ್ಸ್ಟ್ರಕ್ಷನ್ ವತಿಯಿಂದ ಇಲ್ಲಿ ಕಾಮಗಾರಿ ನಡೆಯುತ್ತಿದ್ದು, ಮಂಗಳೂರಿಂದ ಬೆಂಗಳೂರಿಗೆ ಬಲಭಾಗಕ್ಕೆ ನಿರ್ಮಾಣ ಹಂತದ ಸೇತುವೆ ಕುಸಿದು ಬಿದ್ದಿದೆ.

ಆರಂಭದಿಂದಲೇ ಹಲವು ಬಾರಿ ಇಲ್ಲಿನ ಸ್ಥಳೀಯರು ಕಳಪೆ ಕಾಮಗಾರಿಯ ಬಗ್ಗೆ ಪದೇ ಪದೇ ಗುತ್ತಿಗೆದಾರರನ್ನು ಮತ್ತು ಎನ್ಎಚ್ ಅಧಿಕಾರಿಗಳನ್ನು ಎಚ್ಚರಿಸುತ್ತಿದ್ದರು ಎನ್ನಲಾಗಿದೆ. ಸೇತುವೆ ಕಾಮಗಾರಿಯ ಸಂದರ್ಭ ಕಳಪೆ ಗುಣಮಟ್ಟದ ಕಬ್ಬಿಣ, ಸಿಮೆಂಟ್ ಬಳಸುತ್ತಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿತ್ತು.

ಬುಧವಾರ ರಾತ್ರಿ ಕುಸಿದು ಬಿದ್ದ ಪರಕ್ಕಳ ಸೇತುವೆಯು ಸಾರ್ವಜನಿಕರ ಆರೋಪಕ್ಕೆ ಪುಷ್ಟಿ ನೀಡಿದಂತಾಗಿದೆ. ಚತುಷ್ಪಥ ರಸ್ತೆಯ ಒಂದು ಭಾಗದಲ್ಲಿ ಈ ಸೇತುವೆ ಇದ್ದು, ಇನ್ನೊಂದು ಭಾಗದಲ್ಲಿ ಪ್ರಯಾಣಿಕರಿಗೆ ಸಂಚರಿಸಲು ಅವಕಾಶವಿದೆ. ಘಟನೆಯಿಂದ ಸಂಚಾರಕ್ಕೆ ಯಾವುದೇ ತೊಂದರೆಯಾಗಿಲ್ಲ.
