ಧರ್ಮಸ್ಥಳ: ಬ್ರಹ್ಮಶ್ರೀ ನಾರಾಯಣಗುರುಗಳ ಚಿತ್ರವಿದ್ದ ಸ್ತಬ್ಧಚಿತ್ರವನ್ನು ಕೇಂದ್ರದ ಗಣರಾಜ್ಯೋತ್ಸವ ಸಮಿತಿ ತಿರಸ್ಕರಿಸಿದೆ ಎಂದು ನಮಗೆ ಮಾಧ್ಯಮದ ಮೂಲಕ ತಿಳಿದುಬಂತು. ಯಾವ ಮಾನದಂಡದಲ್ಲಿ ಈ ಸ್ತಬ್ಧ ಚಿತ್ರವನ್ನು ತಿರಸ್ಕರಿಸಿದೆ ಎಂದು ನಮಗೆ ತಿಳಿದು ಬಂದಿಲ್ಲ.
ಮನುಕುಲದ ಒಳಿತಾಗಿ ನಿರಂತರ ಸೇವೆ ಸಲ್ಲಿಸುವವರು ಎಲ್ಲ ಜಾತಿ ಜನಾಂಗದ ಉದ್ಧಾರಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರು ಅವರು. ಒಂದೊಮ್ಮೆಗೆ ಕೇರಳದಲ್ಲಿ ಜನಸಾಮಾನ್ಯರು ಅಶ್ಪೃಶ್ಯದ ಪೈಶಾಚಿಕೆಯಿಂದ ನರಳುತ್ತಿರುವ ಸಂದರ್ಭದಲ್ಲಿ ಯಾವುದೇ ದ್ವಂದ್ವ, ಗೊಂದಲ ಆಶಾಂತಿಯನ್ನು ಎಬ್ಬಿಸದೆ ವೇದ ಉಪನಿಷತ್ತುಗಳ ಶಾಂತಿ ಮಂತ್ರದ ಸಿದ್ಧಾಂತದಂತೆ ಸಮಾಜವನ್ನು ಪರಿವರ್ತಿಸಿದ ಏಕೈಕ ಮಹಾನ್ ದಾರ್ಶನಿಕರೇ ಬ್ರಹ್ಮಶ್ರೀ ನಾರಾಯಣಗುರುಗಳು. ಅಂತಹ ಗುರುಗಳಿಗೆ ಇಂದು ವಿಶ್ವದ ಮೂಲೆ ಮೂಲೆಯಲ್ಲಿ ಪೂಜೆ ನಡೆಯುತ್ತಿದೆ ಎಂದರು.
ಪ್ರತಿ ವರ್ಷವೂ ಗಣರಾಜ್ಯೋತ್ಸವ ಪೆರೇಡಿನಲ್ಲಿ ಧಾರ್ಮಿಕ, ಸಾಮಾಜಿಕ ಶೈಕ್ಷಣಿಕ ಕ್ರಾಂತಿಕಾರರ ಸ್ತಬ್ಧ ಚಿತ್ರವನ್ನು ಅಳವಡಿಸುವುದು ಸರಕಾರದ ರೂಢಿಯಾಗಿದೆ. ಅದೇ ರೀತಿ ಈ ವರ್ಷವೂ ಕೂಡ ಈ ವಿಚಾರವನ್ನು ಪುನರ್ ಪರಿಶೀಲಿಸಬೇಕೆಂದು ಕರ್ನಾಟಕ ಸರಕಾರದ ಮೂಲಕ ಕೇಂದ್ರ ಸರಕಾರವನ್ನು ಒತ್ತಾಯಿಸುತ್ತೇನೆ ಎಂದು ಕನ್ಯಾಡಿ ಶ್ರೀರಾಮಕ್ಷೇತ್ರ ಮಹಾಸಂಸ್ಥಾನದ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ತಮ್ಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.