ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ತಮ್ಮ ಚೊಚ್ಚಲ ಬಜೆಟ್ ಅನ್ನು ರಾಜ್ಯ ವಿಧಾನಮಂಡಲದಲ್ಲಿ ಮಂಡಿಸಲಿದ್ದಾರೆ. ಬಜೆಟ್ ಜನಪರ ಮತ್ತು ತೆರಿಗೆ ಮುಕ್ತವಾಗಿರುವ ಸಾಧ್ಯತೆಯಿದೆ. ಬಜೆಟ್ ಮಂಡನೆ ಮಧ್ಯಾಹ್ನ 12.30ಕ್ಕೆ ನಿಗದಿಯಾಗಿದೆ.
2023ರಲ್ಲಿ ನಡೆಯಲಿರುವ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗೆ ಮುನ್ನ ಬಜೆಟ್ ಮಹತ್ವ ಪಡೆದುಕೊಂಡಿದೆ. ನಗರದ ರಸ್ತೆ ಮೂಲಸೌಕರ್ಯಗಳ ದಯನೀಯ ಸ್ಥಿತಿಯಿಂದ ಸರ್ಕಾರದ ಚಿತ್ರಣಕ್ಕೆ ಹೊಡೆತ ಬಿದ್ದಿರುವುದರಿಂದ ಮುಖ್ಯಮಂತ್ರಿ ಬೊಮ್ಮಾಯಿ ನಗರಕ್ಕೆ ದೊಡ್ಡ ಕೊಡುಗೆಯನ್ನು ಘೋಷಿಸುವ ಸಾಧ್ಯತೆಯಿದೆ.
ಬಿಜೆಪಿ ಪಕ್ಷದ ಭದ್ರಕೋಟೆ ಎಂದು ಪರಿಗಣಿಸಲ್ಪಟ್ಟಿರುವ ಉತ್ತರ ಕರ್ನಾಟಕ ಭಾಗದಿಂದ ಬಂದಿರುವ ಸಿಎಂ ಬೊಮ್ಮಾಯಿ ಅವರು ಅಭಿವೃದ್ಧಿ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳಿಗೆ ದೊಡ್ಡ ಪ್ರಮಾಣದ ಹಣವನ್ನು ಘೋಷಿಸುವ ನಿರೀಕ್ಷೆಯಿದೆ. ಕಾಂಗ್ರೆಸ್ ಪಾದಯಾತ್ರೆಯ ನಂತರ, ಬೊಮ್ಮಾಯಿ ನೀರಾವರಿ ಯೋಜನೆಗಳಿಗೆ ಗಮನಾರ್ಹವಾದ ಹಣವನ್ನು ಮಂಜೂರು ಮಾಡಲು, ರೈತರ ಬಗ್ಗೆ ತನ್ನ ಬದ್ಧತೆಯನ್ನು ತೋರಿಸಲು ಇದೀಗ ಸಿಎಂ ಒತ್ತಡಕ್ಕೆ ಸಿಲುಕಿದ್ದಾರೆ.
ಮೂಲಗಳ ಪ್ರಕಾರ, ಎಲ್ಲಾ ಇಲಾಖೆಗಳು ಆದಾಯದ ಗುರಿಯನ್ನು ಪೂರೈಸುತ್ತಿರುವುದರಿಂದ, ಸಿಎಂ ಬೊಮ್ಮಾಯಿ ಅವರಿಗೆ ತೆರಿಗೆ ಹೆಚ್ಚಿಸುವ ಯಾವುದೇ ಒತ್ತಾಯವಿಲ್ಲ. ಆದಾಗ್ಯೂ, ಸಂಪನ್ಮೂಲ ಕ್ರೋಢೀಕರಣ ಮತ್ತು ತೆರಿಗೆ ಮುಕ್ತ ಬಜೆಟ್ ಮಂಡಿಸಲು ಪ್ರಯತ್ನಿಸಲಾಗುವುದು. ಕಳೆದ ವರ್ಷ ಕೋವಿಡ್ ಮಹಾಮಾರಿ ಹಾಗೂ ಪ್ರಕೃತಿ ವಿಕೋಪದಿಂದ ಕಂಗೆಟ್ಟಿರುವ ರೈತರು ಹಾಗೂ ವ್ಯಾಪಾರಸ್ಥರು ಬಜೆಟ್ನಿಂದ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.
ರಾಜ್ಯವು ಅನುಮತಿಸುವ ಮಿತಿಯೊಳಗೆ 40,000 – 50,000 ಕೋಟಿ ರೂಪಾಯಿಗಳ ಸಾಲಕ್ಕೆ ಹೋಗುವ ಸಾಧ್ಯತೆಯಿದೆ, ಇದು ರಾಜ್ಯದ ಸಾಲದ ಅಂಕಿಅಂಶಗಳನ್ನು 5 ಲಕ್ಷ ಕೋಟಿ ರೂಪಾಯಿಗಳಿಗೆ ಕೊಂಡೊಯ್ಯುತ್ತದೆ ಎಂದು ಹಣಕಾಸು ಇಲಾಖೆಯ ಮೂಲಗಳು ತಿಳಿಸಿವೆ.