ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಕ್ರಮ್ ವಾಯ್ಕರ್ ಎನ್ನುವ ಹೆಸರಿನಲ್ಲಿ ಇಮೇಲ್ನಿಂದ ಹುಸಿ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಬಾಂಬ್ ಬೆದರಿಕೆ ಕರೆಯು ನವೆಂಬರ್ 30ರಂದು ಬಂದಿದ್ದು, ಈ ಬಗ್ಗೆ ಸಿಐಎಸ್ ಎಫ್ ಸಿಬ್ಬಂದಿ ಬಜ್ಪೆ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.
ಈ ಬೆದರಿಕೆಯ ಸಂದೇಶವನ್ನು ಹಲವು ಬೇಡಿಕೆಗಳನ್ನಿಟ್ಟುಕೊಂಡು ಕಳುಹಿಸಲಾಗಿದ್ದು, ತಮಿಳುನಾಡಿನಲ್ಲಿ ಬಂಧನಕ್ಕೀಡಾಗಿರುವ ಡ್ರಗ್ ಕಿಂಗ್ ಪಿನ್ ಜಾಫರ್ ಸಾದೀಕ್, ಡಿಸಿಎಂ ಉದಯನಿಧಿ ಸ್ಟಾಲಿನ್ ಪತ್ನಿ ಕೃತಿಕಾ ಉದಯನಿಧಿ ಮೇಲಿನ ಕೇಸ್ ವಾಪಸ್ ಪಡೆಯಬೇಕು. ಹಾಗೆಯೇ ತಿರುಚ್ಚಿ ಸೆಂಟ್ರಲ್ ಜೈಲ್ನಲ್ಲಿರುವ ಟಿಎನ್ಎಲ್ಎ ಉಗ್ರ ಸಂಘಟನೆಯ ಮುಖ್ಯಸ್ಥ ಎಸ್ ಮಾರನ್ ಬಿಡುಗಡೆ ಮಾಡಬೇಕು ಎಂದು ದುಷ್ಕರ್ಮಿ ಬೇಡಿಕೆ ಇಟ್ಟಿದ್ದಾನೆ ಎನ್ನಲಾಗಿದೆ.
ಇನ್ನು ಬೆದರಿಕೆಯಲ್ಲಿ ರಾಮೇಶ್ವರ ಕೆಫೆಯ ವಿಚಾರಗಳನ್ನೂ ಬಳಸಿಕೊಂಡಿದ್ದು, , ಈ ಬೆದರಿಕೆ ಸಂದೇಶ ತಮಿಳುನಾಡಿನಿಂದಲೇ ಬಂದಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗುತ್ತಿದೆ. ಈ ಮೊದಲು ಇದೇ ರೀತಿಯ ಬೆದರಿಕೆ ಸಂದೇಶ ತಿರುಪತಿಯ ಎರಡು ಹೆಸರಾಂತ ಹೊಟೇಲ್ಗೂ ಬಂದಿತ್ತು ಎನ್ನಲಾಗಿದೆ.