ಮಂಗಳೂರು: ಶಿರಾಡಿ, ಚಾರ್ಮಾಡಿ ವಿಚಾರದಲ್ಲಿ ರಸ್ತೆಯನ್ನ ಸಮಸ್ಯೆ ಇದ್ದರೆ ಮಾತ್ರ ಬಂದ್ ಮಾಡಿ.ಇಲ್ಲದಿದ್ದರೆ ಜನರಿಗೆ ಸಮಸ್ಯೆಯಾಗುತ್ತದೆ. ರಸ್ತೆ ಮಾಡುವಾಗ ಗುಡ್ಡ ಕಡಿಯಬೇಕು, ಆ ಸಮಸ್ಯೆಯನ್ನ ಮೊದಲೇ ಪರಿಹಾರ ಮಾಡಬೇಕು. ಇಲ್ಲದೇ ಇದ್ದರೆ ಮಳೆಗಾಲದಲ್ಲಿ ಗುಡ್ಡ ಕುಸಿತವಾಗುತ್ತದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಗುಡ್ಡವು ಸ್ವಲ್ಪ ಜರಿದ ತಕ್ಷಣ ಇಡೀ ರಸ್ತೆಯನ್ನು ಬಂದ್ ಮಾಡುವುದಲ್ಲ. ರಸ್ತೆ ಬಂದ್ ಮಾಡುವಂತಹ ಅಂತಹ ಅಗತ್ಯವಿದ್ದರೆ ಮಾತ್ರ ರಸ್ತೆ ಬಂದ್ ಮಾಡಲು ಸೂಚಿಸಿದ್ದೇನೆ. ಗುಡ್ಡ ಜರಿದಾಗ ಮಣ್ಣು ತೆರವಿಗೆ ಹತ್ತು ಕಿ.ಮೀಗೊಂದು ತಂಡ ಇಡಬೇಕು. ಅವರು ಮಣ್ಣು ತೆರವು ಮಾಡಿ ಸಂಚಾರ ಅನುವು ಮಾಡಬೇಕು ಎಂದರು.
ದ.ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲಾಧಿಕಾರಿಗಳ ನಡುವೆ ಸಮನ್ವಯತೆ ಇರಬೇಕು. ಹೀಗಾಗಿ ಇವತ್ತು ಅಧಿಕಾರಿಗಳ ತಂಡ ಎಲ್ಲಾ ಜಾಗ ಪರಿಶೀಲನೆ ನಡೆಸಲಿದೆ. ಹೆದ್ದಾರಿ ಅಧಿಕಾರಿಗಳ ಜೊತೆ ಡಿಸಿ ಕೂಡ ಇರುತ್ತಾರೆ, ಮಾಹಿತಿ ಸಂಗ್ರಹಿಸುತ್ತಾರೆ ಎಂದರು.