ಉಡುಪಿ: ಬಿಜೆಪಿಯಿಂದ ಯಾರಾದರೂ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರಾ ಎಂದು ಸಿದ್ದರಾಮಯ್ಯ ಪ್ರಶ್ನಿಸುತ್ತಿದ್ದಾರೆ. ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮ ಪ್ರಸಾದ್ ಮುಖರ್ಜಿ ಅವರು ಪ್ರಾಣ ತ್ಯಾಗ ಮಾಡಿದ ಮೊದಲ ವ್ಯಕ್ತಿ. ಸಿದ್ದರಾಮಯ್ಯ ಅವರಿಗೆ ನಾಲಿಗೆಯ ಮೇಲೆ ಹಿಡಿತವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಬಿಎಲ್ ಸಂತೋಷ್ ಹೇಳಿದರು.
ಉಡುಪಿಯಲ್ಲಿ ಡಿ.15ರಂದು ಬುಧವಾರ ನಡೆದ ಬಿಜೆಪಿ ಸಮಾವೇಶದಲ್ಲಿ ಅವರು ಮಾತನಾಡಿದರು.
ಶ್ಯಾಮ ಪ್ರಸಾದ್ ಮುಖರ್ಜಿಯವರ ಬಗ್ಗೆ ಮನೆಯಲ್ಲಿ ಕೂತು ಶಾಂತ ಮನಸ್ಸಿನಿಂದ ಓದಲಿ, ದೇವರು ಎಲ್ಲರಿಗೂ ಆತ್ಮಸಾಕ್ಷಿ ಕೊಟ್ಟಿದ್ದಾನೆ, ಆದರೆ ಕೆಲವರು ಆತ್ಮಸಾಕ್ಷಿಯನ್ನೇ ಕೊಂದಿದ್ದಾರೆ, ಅವರಲ್ಲಿ ವಿರೋಧ ಪಕ್ಷದ ನಾಯಕರೂ ಇದ್ದಾರೆ ಎಂದರು.
ಯಾರೂ ಕೂಡ ತಮ್ಮ ಮತವನ್ನು ಮಾರಿಕೊಳ್ಳಬಾರದು ಎಂದು ಸಂತೋಷ್ ಹೇಳಿದರು. “ರಾಜಕಾರಣಿ ತಾನು ಮಾರಾಟಕ್ಕಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ದಕ್ಷಿಣ ಕನ್ನಡ-ಉಡುಪಿಯಲ್ಲಿ ಶೇ.99ರಷ್ಟು ಜನ, ಮಾರಾಟಕ್ಕಿಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಇದು ಸಾಬೀತಾಗಿದೆ. ಸಾರ್ವಜನಿಕ ಜೀವನದಲ್ಲಿ ಇರುವ ಜನರು ಈ ಬದ್ಧತೆಯನ್ನು ಹೊಂದಿರಬೇಕು.
ಸಿದ್ದರಾಮಯ್ಯ ಅವರು ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡುವುದನ್ನು ವಿರೋಧಿಸಿದರು. ಸಾವರ್ಕರ್ ಅವರ ಜೀವನ ಕಥೆ ಪ್ರತಿಯೊಬ್ಬ ಯುವಕರಿಗೂ ತಲುಪಬೇಕು. ಸಿದ್ದರಾಮಯ್ಯ ಅವರನ್ನು ಜನ ತಿರಸ್ಕರಿಸಿದ್ದಾರೆ. ಮುಂದೆಯೂ ಜನ ಅವರನ್ನು ತಿರಸ್ಕರಿಸುತ್ತಾರೆ. ಅವರ ಎಲ್ಲಾ ಕಾಮೆಂಟ್ಗಳಿಗೆ ನಾವು ಪ್ರತಿಕ್ರಿಯಿಸಬೇಕಾಗಿಲ್ಲ. ಅಭಿವೃದ್ಧಿಗಾಗಿ ಜನರು ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದಾರೆ. ಕಾಂಗ್ರೆಸ್ ನಾಯಕರು ಕೇಳುವ ಎಲ್ಲಾ ಪ್ರಶ್ನೆಗಳಿಗೆ ನಾವು ಉತ್ತರಿಸುವ ಅಗತ್ಯವಿಲ್ಲ ಎಂದು ಅವರು ಹೇಳಿದರು.