ಬಿಜೆಪಿ ನಾಯಕರಿಗೆ`ಸಿದ್ದರಾಮೋತ್ಸವʼದಿಂದ ಈಗಾಗಲೇ ನಡುಕ ಶುರುವಾಗಿದೆ. ಕಾರ್ಯಕ್ರಮದಲ್ಲಿ ಎಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ಸೇರುತ್ತಾರೆ ಅಂತ ಬಿಜೆಪಿ ಪಾಳ್ಯ ಭಯದಲ್ಲಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಚಾರ ಸಮಿತಿ(ಕೆಪಿಸಿಸಿ) ಅಧ್ಯಕ್ಷ ಎಂ ಬಿ ಪಾಟೀಲ್ ಕುಟುಕಿದ್ದಾರೆ.
ಅವರು ಬೆಂಗಳೂರಿನ ಅರಮನೆ ಮೈದಾನದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಯುವ ಜನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, “ಸಿದ್ದರಾಮಯ್ಯ ಪ್ರಭಾವ ಎಷ್ಟಿದೆ ಎಂಬುದು ಬಿಜೆಪಿಗೆ ಗೊತ್ತಿದೆ. ಸಿದ್ದರಾಮೋತ್ಸವವನ್ನು ನಳಿನ್ ಕುಮಾರ್ ಕಟೀಲ್ ಕಾದು ನೋಡಿ ಮಾತನಾಡಲಿ” ಎಂದು ಹರಿಹಾಯ್ದರು.
“ಇನ್ನು ಯಾವ ಸಚಿವರೂ ಕೂಡಾ ನೆರೆ ಪ್ರದೇಶಕ್ಕೆ ಹೋಗಿದ್ದು ನೋಡಿಲ್ಲ. ಬರೀ ಕಾಟಾಚಾರಕ್ಕೆ ಹೇಳಿಕೆ ಕೊಡುತ್ತಾರೆ. ಇದು ಮುಖ್ಯಮಂತ್ರಿ ಮತ್ತು ಸಚಿವ ಸಂಪುಟದ ಮಂತ್ರಿಗಳಿಗೆ ಜನರ ಬಗ್ಗೆ ಇರುವ ಬದ್ಧತೆ ತೋರಿಸುತ್ತದೆ” ಎಂದು ಟೀಕಿಸಿದರು.
“ಮಳೆಯಾಗುತ್ತಿರುವ ಸಂದರ್ಭದಲ್ಲಿ ಯಾರೂ ಪ್ರವಾಸ ಮಾಡುತ್ತಿಲ್ಲ. ಇದಕ್ಕೆ ಸಂಬಂಧಿಸಿದ ಸಚಿವರು ಇರೋದು ಯಾಕೆ? ಜನರ ನೆರವಿಗೆ ಬರಬೇಕು ಅಲ್ವಾ? ಅದನ್ನು ಬಿಟ್ಟು ಆ ಸಂದರ್ಭದಲ್ಲಿ ಅಷ್ಟು ಕೊಡ್ತೀವಿ ಇಷ್ಡು ಕೊಡ್ತೀವಿ ಅಂತಾರೆ. ಕೃಷ್ಣಾ ಕಣಿವೆ ವ್ಯಾಪ್ತಿಯಲ್ಲಿ ಮತ್ತೆ ಪ್ರವಾಹ ಭೀತಿ ಶುರುವಾಗಿದೆ. ಕಳೆದ ವರ್ಷ ಮತ್ತು ಅದರ ಹಿಂದಿನ ವರ್ಷವೂ ಯಾವ ಪರಿಹಾರ ಕೊಡಲಿಲ್ಲ. ಇದರಿಂದ ಜನರು ತತ್ತರಿಸಿ ಹೋಗಿದ್ದಾರೆ” ಎಂದು ತಿಳಿಸಿದರು.