ಬೆಂಗಳೂರು: ಯುವಕರಲ್ಲಿ ಧನಾತ್ಮಕ ಚಿಂತನೆಗಳನ್ನು ಬೆಳೆಸುವ ಪಕ್ಷ ಬಿಜೆಪಿ ಎಂದು ಬಿಜೆಪಿ ಯುವ ಮೋರ್ಛಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಕಚೇರಿಯಲ್ಲಿ ಯುವ ಮೋರ್ಛಾ ವತಿಯಿಂದ ನಮೋ ಯುವ ಭಾರತ ಫೆಲೋಶಿಫ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಪೂಂಜ, ಕಾಂಗ್ರೆಸ್ ಸರ್ಕಾರವು ಕಳೆದ 65 ವರ್ಷಗಳಲ್ಲಿ ಮಾಡಿದ ಅವಾಂತರಗಳನ್ನು ಜನತೆಗೆ ಮುಟ್ಟಿಸುವ ಕೆಲಸವನ್ನು ಬಿಜೆಪಿಯ ವಿವಿಧ ಮೋರ್ಛಾಗಳು ಮಾಡಲಿವೆ ಎಂದು ಹೇಳಿದ್ದಾರೆ.
ಬಿಜೆಪಿ ಯುವ ಮೋರ್ಛಾ ವತಿಯಿಂದ ನಮೋ ಯುವ ಭಾರತ್ ಫೆಲೋಶಿಪ್ ಕಾರ್ಯಕ್ರಮದಡಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ಸಾಧನೆಗಳ ಕುರಿತ ರೀಲ್ಸ್ ಮಾಡುವ ಸ್ಫರ್ಧೆ ಆಯೋಜಿಸಲಾಗುತ್ತಿದ್ದು, ಗರಿಷ್ಠ ಲೈಕ್ ಪಡೆಯುವ 10 ರೀಲ್ಗಳನ್ನು ಆಯ್ಕೆ ಮಾಡಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದಾಗ ಅವರನ್ನು ಮುಖತಃ ಭೇಟಿ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ.
90 ಸೆಕೆಂಡ್ಗಳ ರೀಲ್ ಮಾಡಬೇಕಾಗಿದ್ದು, ಮಹಿಳೆ, ಯುವಜನತೆ, ಅನ್ನದಾತ ಮತ್ತು ಬಡವ ಎಂಬ 4 ವಿಭಾಗಗಳಲ್ಲಿ ಸ್ಫರ್ಧೆ ನಡೆಯಲಿದೆ.