ಬೆಂಗಳೂರು: ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಹಾವು-ಮುಂಗುಸಿಯಂತಿದ್ದ ಬಿಜೆಪಿ, ಜೆಡಿಎಸ್ ಮತ್ತೆ ಮರು ಮೈತ್ರಿಯಾಗಲು ವೇದಿಕೆ ಸಜ್ಜಾಗಿದೆ. ವಿಧಾನಪರಿಷತ್ ಸಭಾಪತಿ ಪ್ರತಾಪ್ಚಂದ್ರ ಶೆಟ್ಟಿ ವಿರುದ್ಧ ಬಿಜೆಪಿಯು ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಯಾವುದೇ ಕ್ಷಣದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ. ತೆರವಾಗಲಿರುವ ಸಭಾಪತಿ ಸ್ಥಾನವು ಜೆಡಿಎಸ್ಗೆ ಬಿಟ್ಟುಕೊಡಲು ಬಿಜೆಪಿ ತೀರ್ಮಾನಿಸಿದೆ. ಈ ಪ್ರಕಾರವಾಗಿ ಸದನದ ಹಿರಿಯ ಸದಸ್ಯ ಬಸವರಾಜ್ ಹೊರಟ್ಟಿ ವಿಧಾನಪರಿಷತ್ನ ನೂತನ ಸಭಾಪತಿ ಯಾಗುವುದು ಬಹುತೇಕ ಖಚಿತವಾಗಿದೆ.
ಬಿಜೆಪಿಯಿಂದ ವಿಧಾನಪರಿಷತ್ ಉಪಸಭಾಪತಿ ಸ್ಥಾನಕ್ಕೆ ಎಂ.ಕೆ ಪ್ರಾಣೇಶ್ ಆಯ್ಕೆಯಾಗಿದ್ದು, ನಾಳೆ ಬೆಳಗ್ಗೆ 10 ಗಂಟೆಗೆ ಉಪಸಭಾಪತಿ ಸ್ಥಾನಕ್ಕೆ ವಿಧಾನಸೌಧದಲ್ಲಿ ಎಂಕೆ ಪ್ರಾಣೇಶ್ ನಾಮಪತ್ರ ಸಲ್ಲಿಸಲಿದ್ದಾರೆ. ಇನ್ನೂ, ವಿಧಾನಪರಿಷತ್ ಸಭಾಪತಿ, ಉಪಸಭಾಪತಿ ಆಯ್ಕೆ ಕುರಿತಂತೆ ಮೇಲ್ಮನೆಯಲ್ಲಿ ಬಿಜೆಪಿಗೆ ಜೆಡಿಎಸ್ ಅನಿವಾರ್ಯವಾಗಿದೆ. ಕೊನೆಗೂ ಬಿಜೆಪಿ ಜೆಡಿಎಸ್ ಗೆ ಸಭಾಪತಿ ಸ್ಥಾನ ಬಿಟ್ಟು ಕೊಟ್ಟಿದೆ.
ಬಿಜೆಪಿ ಬೆಂಬಲದೊಂದಿಗೆ ಸಭಾಪತಿ ಸ್ಥಾನ ಅಲಂಕರಿಸಲು ಬಸವರಾಜ ಹೊರಟ್ಟಿ ಸಿದ್ದತೆ ನಡೆಸಿದ್ದಾರೆ. ಇನ್ನೂ, ಸಿಎಂ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಸಭಾಪತಿ, ಉಪಸಭಾಪತಿ ಸ್ಥಾನದ ಬಗ್ಗೆ ತೀರ್ಮಾನ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.