ಪುತ್ತೂರು : ಕಳೆದ ರಾತ್ರಿ ಬೈಕ್ ಹಾಗು ಕಾರು ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಬೈಕ್ ಸವಾರಿಬ್ಬರೂ ದಾರುಣವಾಗಿ ಸಾವಿಗೀಡಾದ ಘಟನೆ ನರಿಮೊಗರು ಶಾಲಾ ಬಳಿ ಕಳೆದ ರಾತ್ರಿ ಸಂಭವಿಸಿದೆ. ಸಾವಗೀಡಾದವರನ್ನು ಕುರಿ ಗ್ರಾಮದ ಇಡಬೆಟ್ಟು ಬಳಿಯ ಕಟ್ಟದಬೈಲು ನಿವಾಸಿ ಐತ್ತಪ್ಪ ಅವರ ಮಗ ಮಿಥುನ್ (18) ಹಾಗು ಐತ್ತಪ್ಪ ಸಹೋದರ ಉಮೇಶ್ ಎಂಬುವರ ಮಗ ಭವಿತ್ (19) ಎಂದು ಗುರುತಿಸಲಾಗಿದೆ.
ಬೈಕ್ ಮತ್ತು ಕಾರಿನ ಮಧ್ಯೆ ಅಪಘಾತವಾಗಿದೆ. ತಲೆಗೆ ತೀವ್ರ ಗಾಯಗೊಂಡಿದ್ದ ಸವಾರರೀರ್ವರೂ ಸಾವಿಗೀಡಾಗಿದ್ದಾರೆ. ವೀರಮಂಗಲ ಸಮೀಪ ನಡೆದ ಮದುವೆ ಮೆಹಂದಿ ಕಾರ್ಯಕ್ರಮವೊಂದಕ್ಕೆ ಮಿಥುನ್, ಭವಿತ್ ಸಹೋದರರು ಬೈಕ್ನಲ್ಲಿ ಹೋಗಿ ಬರುತ್ತಿದ್ದ ವೇಳೆ ಘಟನೆ ನಡೆದಿದೆ. ಮೃತ ಮಿಥುನ್ ಅವರು ನರಿಮೊಗ್ರು ಐಟಿಐ ವಿದ್ಯಾರ್ಥಿಯಾಗಿದ್ದರೆ, ಭವಿತ್ ಅವರು ಸೆಂಟ್ರಿಂಗ್, ಬಾವಿಗೆ ರಿಂಗ್ ಅಳವಡಿಸುವ ವೃತ್ತಿ ನಿರ್ವಹಿಸುತ್ತಿದ್ದರು. ಅಪಘಾತಕ್ಕೀಡಾಗಿ ರಸ್ತೆ ಮಧ್ಯೆ ಬಿದ್ದಿದ್ದ ಸವಾರರಿಬ್ಬರನ್ನು ಅದೇ ರಸ್ತೆಯಾಗಿ ಹೋಗುತ್ತಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇಗುಲದ ವಠಾರದ ಗಣೇಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಅವರು ತನ್ನ ಕಾರಿನಲ್ಲಿ ಕರೆತಂದು ಪುತ್ತೂರು ಆದರ್ಶ ಆಸ್ಪತ್ರೆಗೆ ದಾಖಲಿಸಿದ್ದರು.
ಆದರೆ ತಲೆಗೆ ಗಂಭೀರ ಗಾಯಗೊಂಡಿದ್ದ ಸವಾರರಿಬ್ಬರು ಸಾವಿಗೀಡಾಗಿದ್ದಾರೆ. ಸ್ಥಳಕ್ಕೆ ಸಂಪ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.