ಬೆಳ್ತಂಗಡಿ: ನಾನು ಅಕ್ರಮ ಮರಳು ಸಾಗಾಣಿಕೆ, ಮರ ಸಾಗಾಟ, ಹಾಗೇ ಗೋವುಗಳನ್ನು ಸಾಗಾಟ ಮಾಡುವವರಿಗೆ ಬೆಂಬಲ ನೀಡುತ್ತಿದ್ದೇನೆ ಎಂಬ ಮಾಜಿ ಶಾಸಕ ವಸಂತ ಬಂಗೇರ ಅವರ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಭಾಸ್ಕರ ಧರ್ಮಸ್ಥಳ ಹೇಳಿದ್ದಾರೆ,
ಈ ಬಗ್ಗೆ ಬೆಳ್ತಂಗಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನನ್ನ ವಿರುದ್ಧ ವಸಂತ ಬಂಗೇರ ಅವರು ಮಾಡಿದ ಆರೋಪ ನಿಜ ಅನ್ನೋದಾದ್ರೆ ಅವರು ನಾನು ಹೇಳಿದ ಮೂರು ಪುಣ್ಯಕ್ಷೇತ್ರಗಳಲ್ಲಿ ಒಂದು ಕಡೆ ಬಂದು ಅವರು ಪ್ರಮಾಣ ಮಾಡಬೇಕು ಎಂದಿದ್ದಾರೆ.
ನಾನು ಹಿಂದೂ ಸಮಾಜದ ಒಳಿತಿಗಾಗಿ ಕೆಲಸ ಮಾಡುತ್ತಲೇ ಬಂದಿದ್ದೇನೆ. ಆದರೂ ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಇನ್ನು ದಿನೇಶ್ ಸಾವು ಪ್ರಕರಣದಲ್ಲೂ ನನ್ನನ್ನು ಎಳೆದು ಬೇರೆ ಬೇರೆ ರೀತಿಯಲ್ಲಿ ಆರೋಪಗಳನ್ನು ಮಾಡಲಾಗುತ್ತಿದೆ. ನಾನೇ ಹತ್ಯೆ ಮಾಡಿದ್ದೇನೆ. ನಾನು ಗೋ ಮಾಂಸ ತಿನ್ನುತ್ತೇನೆ ಎಂದೆಲ್ಲಾ ಹೇಳಲಾಗುತ್ತಿದೆ. ದಿನೇಶ್ ತಾಯಿ ಕೂಡ ಈ ಆರೋಪಕ್ಕೆ ಬೆಂಬಲ ನೀಡಿದ್ದಾರೆ.
ಮಾಜಿ ಶಾಸಕ ವಸಂತ ಬಂಗೇರ ಅವರು ನನ್ನ ಮೇಲೆ ಮಾಡುತ್ತಿರುವ ಆರೋಪಗಳಿಗೆ ಪುಣ್ಯ ಕ್ಷೇತ್ರಗಳಾದ ಧರ್ಮಸ್ಥಳ, ಕಾನತ್ತೂರು ಅಥವಾ ಕೊರಗಜ್ಜ ಮೂಲಕ್ಷೇತ್ರ ಕುತ್ತಾರು ಈ ಮೂರು ಕ್ಷೇತ್ರಗಳಲ್ಲಿ ಒಂದು ಕಡೆ, ಅವರು ದಿನೇಶ್ ತಾಯಿ ಜೊತೆ ಬಂದು ಪ್ರಮಾಣ ಮಾಡಬೇಕು ಎಂದಿದ್ದಾರೆ.ಅಲ್ಲದೇ ನನ್ನ ತಮ್ಮ ಕೃಷ್ಣ ಭಜರಂಗದಳದಲ್ಲಿ ಗುರುತಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.