ಬೆಳ್ತಂಗಡಿ: ಕಳೆದ ವಿಧಾನ ಸಭಾ ಚುನಾವಣೆ ಸೋಲು ಗೆಲುವಿನ ವಿಮರ್ಶೆಗಾಗಿ ಸೇರಿದ್ದ ವೀಕ್ಷಕರ ಮುಂದೆಯೇ ರಕ್ಷಿತ್ ಶಿವರಾಂ ಸೋಲಿಗೆ ಬ್ಲಾಕ್ ಕಾಂಗ್ರೆಸ್ ನೇರ ಕಾರಣ ಎಂದು ಆತ್ಮೀಯ ಬಳಗವೊಂದು ಸಭೆಯಲ್ಲಿ ಗಲಭೆ ಎಬ್ಬಿಸಿ ಗಲಾಟೆ ನಡೆದ ಘಟನೆ ಜು.14 ರಂದು ಸಂಜೆ ನಡೆದಿದೆ.
ಬೆಳ್ತಂಗಡಿ ಮೂರು ಮಾರ್ಗದ ಬಳಿ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಜಿ.ಪಂ. ಮಾಜಿ ಅಧ್ಯಕ್ಷೆ ಮಮತಾ ಗಟ್ಟಿ, ರಾಜ್ಯಸಭಾ ಮಾಜಿ ಸದಸ್ಯ ಇಬ್ರಾಹಿಂ, ಸಹಿತ ಅಶ್ವಿನ್ ರೈ ಬಂಟ್ವಾಳ್ ವೀಕ್ಷಕರಾಗಿ ಸೇರಿದ್ದರು.
ಸಭೆ ಆರಂಭವಾಗುತ್ತಲೇ ಪ್ರವೀಣ್ ಫೆರ್ನಾಂಡೀಸ್, ಸಚಿನ್ ನೂಜೋಡಿ ಸಹಿತ 30 ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸೋಲಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೈಲೇಶ್ ಕುಮಾರ್ ,ರಂಜನ್ ಗೌಡ ಹಾಗೂ ಗಂಗಾಧರ್ ಗೌಡ ಕಾರಣ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕೆಂದು ಬಿಗಿ ಪಟ್ಟು ಹಿಡಿದು ಗಲಾಟೆ ನಡೆಸಿದರು.
ವಿಧಾನ ಪರಿಸತ್ ಸದಸ್ಯ ಕೆ.ಹರೀಶ್ ಕುಮಾರ್ ಪುತ್ರ ಅಭಿನಂದನ್ ಹರೀಶ್ ಹಾಗೂ ಸ್ವಯಂ ಘೋಷಿತ ನಾಯಕನೆನಿಸಿಕೊಂಡ ಮೋಹನ್ ಗೌಡ ಕಲ್ಮಂಜ ಕಾರ್ಯಕರ್ತರ ಬಳಿ ಏಕವಚನದಲ್ಲಿ ಮಾತಾನಾಡಿದ್ದು, ಈ ವೇಳೆ ಅಭಿನಂದನ್ ಹರೀಶ್ ಕುಮಾರ್ ಉಂದು ಎನ್ನಾ ಅಫೀಸ್, ಉಂದು ಎನ್ನ ಚೇರ್ ,ಉಂದು ಎಂಕ್ಲೆನಾ ಪಾರ್ಟಿ , ಉಂದು ಎಂಕ್ಲೆನಾ ಸೋಫಾ ಅಂತ ಹೇಳಿ ನೀವು ಒಳಗೆ ಬರಬೇಡಿ ಎಂದು ಬೊಬ್ಬೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ . ಈ ನಡುವೆ ಮಾತಿಗೆ ಮಾತು ಬೆಳೆದು ಒಬ್ಬರಿಗೊಬ್ಬರು ಹೊಡೆದಾಡಿಕೊಳ್ಳುವವರೆಗೆ ಗಲಾಟೆ ತಲುಪಿತು. ಮೋಹನ್ ಗೌಡ ಕಲ್ಮಂಜ ಮತ್ತು ಗಣೇಶ್ ಕಣಿಯೂರು ಅವರ ನಡುವೆ ಹೊಯ್ ಕೈ ನಡೆದಿತ್ತು ಎಂದು ವರದಿಯಾಗಿದೆ.
ತಕ್ಷಣ ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಘಟನೆಯನ್ನು ಶಾಂತಗೊಳಿಸಿದರು. ಬೆಳ್ತಂಗಡಿ ಕಾಂಗ್ರೆಸ್ ಪಕ್ಷದ ಮರ್ಯಾದೆಯನ್ನು ಮೂರು ಮಾರ್ಗದ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಚೇರಿಯ ಮುಂದೆ ಬೀದಿ ಪಾಲು ಮಾಡಿದ್ದಾರೆ.