ಬೆಳ್ತಂಗಡಿ: ಇಲ್ಲಿನ ನಗರ ಪಂಚಾಯತ್ ಪಂಪ್ ಹೌಸ್ ಬಳಿ ಸೋಮಾವತಿ ನದಿಯಲ್ಲಿ ನಿನ್ನೆ ಸಂಜೆ ಮೀನು ಹಿಡಿಯಲು ಹೋಗಿ ನಿಗೂಢವಾಗಿ ನಾಪತ್ತೆಯಾಗಿದ್ದ ಉಜಿರೆ ಶಿವಾಜಿ ನಗರದ ರೆಂಜಳ ನಿವಾಸಿ ರಮೇಶ್ (48) ಎಂಬವರ ಮೃತದೇಹವು ಇಂದು ಪತ್ತೆಯಾಗಿದೆ.
ಸೋಮವಾರ ಸಂಜೆ 5 ಗಂಟೆ ಬಳಿಕ ರಮೇಶ್ ಮತ್ತು ಮತ್ತೊಬ್ಬ ವ್ಯಕ್ತಿ ನದಿಯ ಬಳಿ ನಾಪತ್ತೆಯಾಗಿದ್ದು, ಮನೆಮಂದಿ ಅವರ ಮೊಬೈಲ್ ಗೆ ಕರೆ ಮಾಡಿದರೂ ಸ್ವೀಕರಿಸುತ್ತಿರಲಿಲ್ಲ. ಮಂಗಳವಾರ (ಇಂದು) ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ಕರೆ ಮಾಡಿದ ಸಂದರ್ಭ ರಮೇಶ್ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು ಎಂದು ಸಹೋದರ ಹೇಳಿದ್ದಾರೆ.

ಇದರ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ ಬೆಳ್ತಂಗಡಿ ಸೋಮಾವತಿ ನದಿಯ ಜಾಕ್ ವೆಲ್ ಸಮೀಪ ದಡದಲ್ಲಿ ಇಂದು ಅವರ ಉಡುಗೆ ಮತ್ತು ಮೀನು ಹಿಡಿಯುವ ಬಲೆ, ಮೊಬೈಲ್ ದೊರಕಿದೆ. ಕೂಡಲೇ ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ ಭೇಟಿ ನೀಡಿ ನದಿಯಲ್ಲಿ ಶೋಧಕಾರ್ಯ ಮುಂದುವರೆಸಿದ್ದು, ಇಂದು ಸಂಜೆಯ ವೇಳೆಗೆ ರಮೇಶ್ ಅವರ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ.
ನಿನ್ನೆ ಸಂಜೆ ವೇಳೆ ರಮೇಶ್ ಅವರ ಜೊತೆ ಇನ್ನೊಬ್ಬ ವ್ಯಕ್ತಿ ಇರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಕುರಿತು ಬೆಳ್ತಂಗಡಿ ಪೊಲೀಸರು ತನಿಖೆ ನಡೆಸಿದಾಗ ಆ ವ್ಯಕ್ತಿ ಉಜಿರೆಯಲ್ಲಿ ಸುರಕ್ಷಿತವಾಗಿ ಇರುವ ಮಾಹಿತಿ ಲಭ್ಯವಾಗಿದೆ. ಆದರೆ ಘಟನೆ ಹೇಗಾಯಿತು ಎಂಬುದು ಪೋಲೀಸರ ತನಿಖೆಯಿಂದ ತಿಳಿದುಬರಬೇಕಾಗಿದೆ. ಘಟನೆಯ ಕುರಿತು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.