ಮುಂಬೈ: ರಾಜ್ಯದಲ್ಲಿ ಸರ್ಕಾರ ಮರಾಠ ಪ್ರಾಧಿಕಾರ ರಚನೆ ಮಾಡಿದ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ಬಾಲ ಬಿಚ್ಚಿದ್ದು, ಕರ್ನಾಟಕದ ಹಲವು ಭಾಗಗಳು ತನ್ನದೆಂದು ಹೇಳುವ ಮೂಲಕ ಮಹಾ ಡಿಸಿಎಂ ಅಜಿತ್ ಪವಾರ್ ವಿವಾದದ ಕಿಡಿ ಹೊತ್ತಿಸಿದ್ದಾರೆ.
ಶಿವಸೇನೆ ನಾಯಕ ದಿ. ಬಾಳಾಠಾಕ್ರೆ ಅವರ ಪುಣ್ಯಸ್ಮರಣೆ ಅಂಗವಾಗಿ ಮಂಗಳವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅಜಿತ್ ಪವಾರ್, ‘ಮರಾಠಿ ಮಾತನಾಡುವವರು ಹೆಚ್ಚಾಗಿ ಇರುವ ಕರ್ನಾಟಕದ ಭಾಗವಾಗಿರುವ ಬೆಳಗಾವಿ, ಕಾರವಾರ ಹಾಗೂ ನಿಪ್ಪಾಣಿ ಸೇರಿದ ಅಖಂಡ ಮಹಾರಾಷ್ಟ್ರದ ಅಭಿವೃದ್ಧಿ ಬಾಳಾ ಠಾಕ್ರೆಯವರ ಕನಸಾಗಿತ್ತು. ನಾವು ಅದನ್ನು ನನಸು ಮಾಡೋಣ’ ಎಂದು ಹೇಳುವ ಮೂಲಕ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಹೊಸ ಕ್ಯಾತೆ ಆರಂಭಿಸಿದ್ದಾರೆ.
ಮೊದಲಿನಿಂದಲೂ ಶಿವಸೇನೆ ನಾಯಕರು ಪದೇ ಪದೇ ಗಡಿ ವಿವಾದ ಕೆದಕುವ ಇತಿಹಾಸ ಹೊಂದಿದ್ದಾರೆ. ಆದರೆ ಇದೀಗ ಎನ್ಸಿಪಿ ಕೂಡಾ ಮಹಾರಾಷ್ಟ್ರ ಆಡಳಿತರೂಢ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಭಾಗವಾಗಿರುವ ಕಾರಣ, ಅವರಿಂದಲೂ ಠಾಕ್ರೆ ಪುಣ್ಯಸ್ಮರಣೆಯಂದು ಇಂಥ ಹೇಳಿಕೆ ಹೊರಬಿದ್ದಿದೆ.
ಕರ್ನಾಟಕ ರಾಜ್ಯ ಸರ್ಕಾರ ಮರಾಠ ಪ್ರಾಧಿಕಾರ ರಚಿಸಿರುವುದಕ್ಕೆ ಈಗಾಗಲೇ ಕರ್ನಾಟಕದಾದ್ಯಂತ ವಿರೋಧ ವ್ಯಕ್ತವಾಗುತ್ತಿದ್ದು, ಈ ನಡುವೆ ಕರ್ನಾಟಕದ ಭಾಗಗಳನ್ನು ತಮ್ಮದೆಂದು ಹೇಳುವ ಮೂಲಕ ಮಹಾ ಡಿಸಿಎಂ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ.